Wednesday 8 April 2015

ಜಾನಪದ ಪರಿಧಿಯೊಳಗೆ ಅಡಗಿರುವ ಎಲ್ಲವೂ ಜನಪದ

   ಜಾನಪದ ಜನವಾಣಿಯ ಬೇರು, ಕವಿವಾಣಿಯ ಹೂಎಂಬ ಹಾಡುವಕ್ಕಿ ಶ್ರೀಯವರ ನುಡಿಯಲ್ಲಿ ಜಾನಪದ ಸ್ವರೂಪ ಅರ್ಥಗರ್ಭಿತವಾಗಿ ಅಡಕವಾಗಿದೆ. ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳಿಂದ ರಚಿತವಾದ ಜಾನಪದವು ತುಂಬಾ ಪ್ರಾಚೀನವೂ, ಆಧುನಿಕ ಬದುಕಿಗೆ ಪ್ರೇರಕವೂ ಆಗಿದೆ. ಸಮಸ್ತ ಜೀವನಾನುಭವದ ಮೊತ್ತವಾದ ಜನಪದವು ಹಲವರ ಅನುಭವವು ಒಬ್ಬನ ಜಾಣ್ಮೆಯಿಂದ ಕಲಾತ್ಮಕ ರೂಪವನ್ನು ಪಡೆದು ಎಲ್ಲರ ಸೊತ್ತಾಗಿದೆ. ಜನಪದ ಸಾಹಿತ್ಯರೂಪಗಳು ಸಂಸ್ಕೃತಿಯಲ್ಲಿ ರೂಪುಗೊಂಡು ಪಕ್ವವಾಗಿವೆ.
   ಸಮಾಜ ಸಮ್ಮತಿಸಿದ ಕಲಿಕೆಯಿಂದ ಬಂದ ನಡವಳಿಕೆಗಳೆಲ್ಲವೂ ಸಂಸ್ಕೃತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವು ಸಂಸ್ಕೃತಿಯ ಪ್ರಮುಖ ಅಂಗವೇ ಆಗಿದೆ. ಮಾನವ ತನ್ನ ಬಗೆಗೆ, ಮನುಕುಲದ ಬಗೆಗೆ, ಒಟ್ಟು ಸಮುದಾಯದ ಬಗೆಗೆ, ಸಮಷ್ಟಿ ಬದುಕಿನ ಬಗೆಗೆ,  ಲೋಕದ ಬಗೆಗೆ ತಳೆದ ನಿಲುವುಗಳು, ಶೇಖರಗೊಂಡಿರುವ ಪರಂಪರಾಗತ ತಿಳಿವೇ ಜಾನಪದ. ಕೇಳಿದ್ದನ್ನು ನೆನಪಿನಲ್ಲಿಡುವುದು, ನೋಡಿದ್ದನ್ನು ಅನುಕರಣೆ ಮಾಡುವುದು, ಮೌಖಿಕ ಪರಂಪರೆಯಲ್ಲಿ ಅನೂಚಾನವಾಗಿ ಸಾಗಿಬರುವ ನಡವಳಿಕೆಗಳ ಒಟ್ಟು ಮೊತ್ತವೇ ಜಾನಪದ ಸಾಮಗ್ರಿ. ಮಾನವನ ಬದುಕಿನ ಸಮಸ್ತವೂ ಅದರಲ್ಲಿ ಸಮಾವೇಶವಾಗುತ್ತದೆ.
   ಮಾನವ ತನ್ನ ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಯಿಂದ ನಿಸರ್ಗವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಜ್ಞಾನ ವಿಜ್ಞಾನವನ್ನು ಸಂವರ್ಧನೆ ಮಾಡಿಕೊಂಡು ಸುಖ ಸಂತೋಷವನ್ನು  ಅನುಭವಿಸತೊಡಗಿದನು. ಮಾತು-ಕಥೆ, ಹಾಡು-ಪಾಡು, ಕುಣಿತ-ಮೆರೆತ, ಹಬ್ಬ-ಹರಿದಿನ, ಆಟೋಟಗಳು ನಂಬಿಕೆ ಸಂಪ್ರದಾಯಗಳು, ಆಚರಣೆ ಆರಾಧನೆಗಳೆಲ್ಲವನ್ನೂ ಬದುಕಿನೊಂದಿಗೆ ಬೆಸೆದುಕೊಂಡನು. ಬದುಕಿನ ಪ್ರತಿಯೊಂದು ಕ್ರಿಯೆಯೂ ಸಹ್ಯವಾಗುವಂತೆ ತನ್ನನ್ನು ತಾನು ತೊಡಗಿಸಿಕೊಂಡನು. ಅದರ ಫಲವೋ ಎಂಬಂತೆ ಮೌಖಿಕ, ವಾಚಿಕ, ಕಂಠಸ್ಥ, ಥೋಡೀ ಸಂಪ್ರದಾಯವು ಎಲ್ಲಿಯೂ ಸ್ಥಗಿತವಾಗದೆ ಪರಂಪರಾಗತವಾಗಿ ಮುಂದುವರಿಯಿತು. ಪುರಾಣ, ಐತಿಹ್ಯ, ಗೀತೆ, ಕಥೆ, ಗಾದೆ, ಒಗಟು, ಲಾವಣಿ, ಭಾಷೆ, ನಂಬಿಕೆ, ವಿಭಿನ್ನ ಆಚರಣೆ, ವೈದ್ಯ, ವ್ಯವಸಾಯ, ಅಡಿಗೆ, ಬೇಟೆ, ಆಟ, ಮಂತ್ರ-ಮಾಟ ಮುಂತಾದ ಕಲೆಗಳು ಸಮೃದ್ಧವಾಗಿ ಬೆಳೆಯುತ್ತಾ, ಅವಿನಾಭಾವವಾಗಿ ಬದುಕಿನೊಂದಿಗೆ ಬೆರೆತು ಪಿತ್ರಾರ್ಜಿತ ಆಸ್ತಿಯಂತೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿತು
     ಬಾಳಪಯಣದ ನೋವು-ನಲಿವು, ಸೋಲು-ಗೆಲುವು, ಎತ್ತರ-ಬಿತ್ತರ, ಸುಖ-ದುಃಖ, ಕಷ್ಟ-ಕಾರ್ಪಣ್ಯ ಎಲ್ಲಾ ಭಾವನೆಗಳು ಅನುಭವದ ಮೂಸೆಯಲ್ಲಿ ಬೆಂದು ಪರಿಶುದ್ಧವಾಗಿ ಅಲ್ಲಲ್ಲಿಯ ಪರಿಸರಕ್ಕೆ ಅನುಗುಣವಾಗಿ ಹಾಡು, ಹಸೆ, ಕಥೆ, ಕುಣಿತ, ಮೆರೆತ, ಗಾದೆ, ಒಗಟು ಮುಂತಾದ ರೂಪವನ್ನು ತಳೆದು ಆಯಾಯ  ಜನಪದ ಸಮುದಾಯದ ಆತ್ಮಚರಿತ್ರೆಯಂತಾಯಿತು. ಜನಪದವು ಅಪ್ಪಟ ಸಂಸ್ಕೃತಿಯ ಪ್ರತಿನಿಧಿಯಂತೆ ರೂಪು ತಳೆಯಿತು.     
    ಅನಾದಿ ಕಾಲದಿಂದಲೂ ಭಾರತದಲ್ಲಿಜನಪದಎಂಬ ಪದ ಬಳಕೆಯಲ್ಲಿದೆ. ಬುದ್ಧ, ಮಹಾವೀರರ ಕಾಲದಲ್ಲಿ ರಾಷ್ಟ್ರಗಳನ್ನು ಜನಪದವೆಂದು ಪರಿಭಾವಿಸಿದ್ದರು. ಜನಪದ ಎನ್ನುವುದು ಸಮುದಾಯ, ಜನ ಸಮೂಹ, ಜನ ಸಮುದಾಯಗಳನ್ನು ಒಳಗೊಂಡ ಆಡಳಿತವೆಂದು ಅರ್ಥೈಸಬಹುದು. ಕೋಸಲ ಜನಪದ, ವಿದರ್ಭ ಜನಪದ, ಕರ್ನಾಟಕ ಜನಪದ ಇತ್ಯಾದಿ. ಕವಿರಾಜಮಾರ್ಗದಲ್ಲಿಯೂ ಪದ ಬಳಕೆಯಾಗಿದೆ.
                                          ಕಾವೇರಿಯಿಂದ ಮಾ ಗೋ
                                          ದಾವರಿವರಮಿರ್ದ ನಾಡದಾ ಕನ್ನಡದೊಳ್ 
                                          ಭಾವಿಸಿದಜನಪದಂವಸು
                                          ಧಾವಳಯವಿಲೀನ ವಿಶದ ವಿಷಯವಿಶೇಷಂ
   ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಜನ ಸಮುದಾಯವನ್ನುಜನಪದವೆಂದು ಕರೆಯಬಹುದು. ಸಂಕೀರ್ಣ ಸ್ವಭಾವದ ನಾಗರಿಕ ಸಮಾಜದಲ್ಲಿ ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು ಮೂಲ ಸಂಸ್ಕೃತಿಯನ್ನು ಪರಂಪರಾಗತವಾಗಿ ಒಯ್ಯುವ ಸಾಮಾಜಿಕ ವರ್ಗ ಅಥವಾ ಸಂಪ್ರದಾಯದೊಂದಿಗೆ ಹೆಣೆದುಕೊಂಡಿರುವ ಒಂದು ಗೊತ್ತಾದ ವರ್ಗದ ಜನಸಾಮಾನ್ಯರ ಸಮೂಹನ್ನು ಜನಪದ ಎನ್ನಬಹುದು. ಒಂದು ಜನಾಂಗ, ಕೆಳಗಿನ ಸ್ತರ, ಸಂಕೀರ್ಣ ಸ್ವಭಾವದ ನಾಗರಿಕ ಸಮಾಜದ ಹಳೆಯ ಗುಂಪು, ಮುಂತಾಗಿಯೂ ಅರ್ಥೈಸುತ್ತಾರೆ. Folk ಪದಕ್ಕೆ ಸಂವಾದಿಯಾಗಿಜನಪದಎಂಬ ಪದವನ್ನು ಡಾ ಹಾ.ಮಾ. ನಾಯಕ್ ಬಳಕೆಗೆ ತಂದಿದ್ದಾರೆ
ಕನ್ನಡದಲ್ಲಿ ಜನಪದರು ಎಂದರೆ ಗ್ರಾಮೀಣರು, ಹಳ್ಳಿಗಾಡಿನ ಜನರು, ಹಳ್ಳಿಗರು ಮುಂತಾಗಿ ಅತ್ಯಂತ ಸರಳವಾಗಿ ಹೇಳಿ ಬಿಡಬಹುದು. ಜನಪದ ಎಂಬ ಪದವು ಎಷ್ಟು ಸರಳವಾಗಿ ಕಾಣುತ್ತದೆಯೋ ಅಷ್ಟೇ ಸಂಕೀರ್ಣವೂ ಆಗಿದೆ
ಆಕ್ಸ್ಫರ್ಡ್ ಅರ್ಥಕೋಶದ ಪ್ರಕಾರ ಜನಪದವೆಂದರೆ
  • ಒಂದೇ ಮೂಲಕ್ಕೆ ಸೇರಿದ, ತಮ್ಮದೇ ಆದ ಪ್ರದೇಶ ಅಥವಾ ರಾಜ್ಯವನ್ನು ಪಡೆದ ಒಂದು ಜನಾಂಗದ ಗುಂಪು, ಮೂಲ ನಿವಾಸಿಗಳ ಸ್ಥಿತಿಯಿಂದ ರಾಜಕೀಯ ಅಥವಾ ಸಾಮಾಜಿಕ ವ್ಯವಸ್ಥೆಯತ್ತ ಹೊರಳುತ್ತಿರುವ ಜನ.
  • ಜನಾಂಗ, ಭಾಷೆ, ಧರ್ಮಗಳಿಗೆ ಬದ್ಧರಾದದ ಒಂದು ಪ್ರಜಾ ಸಮೂಹದ ಸಮಾಜದ ಕೆಳಗಿನ ಸ್ತರ. ತನ್ನದೇ ಆದ ಒಂದು ಸಮೂಹದ ಗುಣವನ್ನು ಪಡೆದುಕೊಂಡು ತನ್ನದೇ ಸಂಪ್ರದಾಯ, ಕಲೆ, ಕೈಗಾರಿಕೆ, ಐತಿಹ್ಯ, ನಂಬಿಕೆಗಳನ್ನು ತಲೆಮಾರಿಗೆ ಬದಲಾಗದಂತೆ ಉಳಿಸಿಕೊಂಡು ಬಂದ ಜನ ಸಮೂಹ.
  • ಒಂದು ರಾಜ್ಯದ ಒಂದು ದೈವದ ಒಂದು ಮತದ ಒಬ್ಬ ಸರ್ವಾಧಿಕಾರಿಯ ಒಬ್ಬ ನಾಯಕನ ಪ್ರಭಾವ ವಲಯಕ್ಕೆ ಅಧಿಕಾರ ವ್ಯಾಪ್ತಿಗೆ ಒಳಗಾದ ಜನತೆಯ ಮೊತ್ತ.
  • ದೇಶದ ಜನಪದ ಎಂದು ಕರೆಸಿಕೊಳ್ಳುವ ಪ್ರಜಾಸಮೂಹ.
  • ಒಂದು ಕುಟುಂಬದ ಸದಸ್ಯರು ಬಂಧು-ಬಳಗ ಇತ್ಯಾದಿ.
     ಸಮಾನ ಅಂಶ ಅಥವಾ ಅಂಶಗಳುಳ್ಳ ಜನರ ಗುಂಪನ್ನುಜನಎನ್ನಬಹುದು. ತಮ್ಮದೇ ಆದ ಪರಂಪರೆಯನ್ನು ಹೊಂದಿದ ಧರ್ಮ, ಮತ, ಜಾತಿ, ಭಾಷೆ, ಕಸುಬು ಯಾವುದಾದರೂ ಸಮಾನ ಅಂಶವಾಗಿರಬಹುದು. ಪರಂಪರೆ ಗುಂಪಿನ ಆರಾಧನೆ, ಆಚಾರ ವಿಚಾರ, ನಂಬಿಕೆ, ಧೋರಣೆಗಳನ್ನು ವ್ಯಕ್ತಪಡಿಸುತ್ತದೆ. ಇದು ತಾವು ಇನ್ನೊಂದು ಗುಂಪಿನವರಿಗಿಂತ ಬೇರೆ ಎನ್ನುವ ಸಮೂಹ ಪ್ರಜ್ಞೆಯನ್ನು ಮೂಡಿಸುತ್ತದೆ. ದೇವರಿಗೆ ನಡೆದುಕೊಳ್ಳುವುದು, ಆಚರಿಸುವ ಆರಾಧನೆ, ಉತ್ಸವ, ಹಬ್ಬಹರಿದಿನಗಳು, ಮದುವೆಯ ಪದ್ಧತಿಗಳನ್ನು ಒಳಗೊಂಡಂತೆ ಪುರಾಣ, ಐತಿಹ್ಯ, ಕಟ್ಟುಕಥೆ, ಕಥೆ, ಚೇಷ್ಟೆ, ಗಾದೆ, ಒಗಟು, ಧಾರ್ಮಿಕ, ವ್ಯಾವಹಾರಿಕ ಹಾಗೂ ಮೂಢನಂಬಿಕೆಗಳು, ಹಾಡು, ಕುಣಿತ, ಆಟಪಾಟ, ಬಯಲಾಟ, ಸಂಗೀತ, ಔಷಧಿ, ಹೆಸರು, ಉಪನಾಮ, ಉಪಭಾಷೆ, ಬೈಗಳು, ಅವಮಾನಿಸುವಾಗ, ಅಭಿನಂದಿಸುವಾಗ, ಆಣೆಮಾಡುವಾಗ, ಬೇಟಿಯಾದಾಗ, ಅಗಲುವಾಗ ಹೇಳುವ ಮಾತುಗಳು ಇತ್ಯಾದಿ ಇತ್ಯಾದಿ ಅನೇಕ ವಿಚಾರಗಳನ್ನು ಪ್ರತಿ ಗುಂಪಿನಲ್ಲೂ ಕಾಣಬಹುದು. ಒಂದು ನಿರ್ದಿಷ್ಟ ಜನಸಮುದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಮೌಖಿಕ ರೂಪದಲ್ಲಿ ಸಾಗಿಬರುವ ಸಂಗೀತ, ಸಾಹಿತ್ಯ, ಕರಕುಶಲ ಕಲೆ, ನಡವಳಿಕೆ, ಸಂಪ್ರದಾಯ, ಆಚರಣೆ, ಆಟ, ಪಾಠ, ಮೊದಲಾದ ಜನಪದದ ಸಮಗ್ರ ಮೊತ್ತವೇ ಜಾನಪದ’ 
ಪರಂಪರಾನುಗತವಾಗಿ ಬಂದ ಆಚಾರ, ವಿಚಾರ, ಪದ್ಧತಿ, ರೂಢಿ, ಉಡುಗೆ ತೊಡುಗೆ, ಆಟ ಪಾಠ, ಹಾಡು ಹಸೆ ಎಲ್ಲವೂ ಜನಪದ. ಎಲ್ಲವನ್ನೂ ಒಳಗೊಂಡಿದ್ದು ಜಾನಪದ. ಹಾ. ಮಾ. ನಾಯಕರು ಹೇಳುವಂತೆ ಜಾನಪದ ಒಂದು ಚಕ್ರದ ಪರಿಧಿಯಾದರೆ, ಅದರ ಒಳಗಿನ ಪ್ರತಿಯೊಂದು ಪುಟಿಗಳು(ಅರಗಳು) ಜನಪದ. ಅಂದರೆ ಜಾನಪದ ಪರಿಧಿಯೊಳಗೆ ಎಲ್ಲಾ ಜನಪದವೂ ಅಡಕವಾಗಿದೆ.
ಜಾನಪದ ಎಂದರೇನು? ಎಂಬ ಪ್ರಶ್ನೆಗೆ ಖಚಿತವಾದ ವ್ಯಾಖ್ಯಾನವನ್ನು ವಿದ್ವಾಂಸರು ಮಾಡುವುದಿಲ್ಲ. ಪ್ರಾರಂಭದ ದಿನಗಳಲ್ಲಿ ಜನಪ್ರಿಯ ನಡಾವಳಿ (Popular Antiquities), ಜನಪ್ರಿಯ ಸಾಹಿತ್ಯ (Popular literature) ಹಿಂದಿನ ನಾಶ ಹೊಂದಿದ ಗುರುತುಗಳು (Fast perishing Relies) ಎಂದು ಜಾನಪದವನ್ನು ಕರೆದಿದ್ದಾರೆ.
ಬಿ.ಎಂ.ಶ್ರೀಕಂಠಯ್ಯ : ಮೊದಲು ಹುಟ್ಟಿದುದು ಜನವಾಣಿ. ಅದು ಬೆಳೆದು, ಪರಿಷ್ಕೃತವಾಗಿ ವೃದ್ಧಿಯಾದುದು ಕವಿವಾಣಿ. ಜನವಾಣಿ ಬೇರು; ಕವಿವಾಣಿ ಹೂವು. ಶಾಸ್ತ್ರಕಾವ್ಯಗಳ ಪರಿಚಯವೇ ಇಲ್ಲದ ಜನಸಾಮಾನ್ಯರೆಲ್ಲರೂ ಹಾಡಿನ ಮಟ್ಟನ್ನು  ಅಂದರೆ ಅಷ್ಟು ಮಟ್ಟಿಗೆ ಛಂದಸ್ಸನ್ನು ಬಲ್ಲವರು.’

ವರಕವಿ ಬೇಂದ್ರೆ : ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದಗರತಿಯ ಹಾಡುಗಳ ಕರ್ತೃಗಳಾದ ಹೆಣ್ಣು ಮಕ್ಕಳು ನಮ್ಮ ತಾಯಿತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು ನಿಜ ಅರ್ಥದಲ್ಲಿ ಋಷಿಗಳು. ಹಾಗೆ ನೋಡಿದರೆ ಅವರದೇ ನಿಜವಾದ ಕಾವ್ಯ. ಜನಪದ ವೇದವೇ ಎಲ್ಲ ಕನ್ನಡಿಗರಿಗೂ ಸಾಮಾನ್ಯವಾದ ತಾಯ ಮೊಲೆಹಾಲು ಎಂಬುದು ಇದನ್ನೋದಿದವರ ಅನುಭವಕ್ಕೆ ಬಾರದೆ ಇರದು.’
ದೇವುಡು ನರಸಿಂಹ ಶಾಸ್ತ್ರಿಗಳು : ಪ್ರಾಚೀನ ಕಾಲದವರ ಮನೋಭಾವನೆಯ ಪ್ರಕಟರೂಪವೇ ಜನತೆಯ ಸಂಸ್ಕೃತಿ. ಜನತೆಯ ಸಂಸ್ಕೃತಿಯು ಅಪಂಡಿತನ ಪ್ರಪಂಚವನ್ನೆಲ್ಲ ಒಳಗೊಂಡಿದೆ.
ದೇ. ಜವರೇ ಗೌಡ : ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಟಿ ಸೃಷ್ಟಿ, ಸಾಮಾಜಿಕ ಜೀವನದ ಸಂಕೇತ, ರಾಷ್ಟ್ರೀಯ ಸಂಸ್ಕೃತಿಯ ತಾಯಿಬೇರು; ಅದು ಜನಸಾಮಾನ್ಯರ ಶ್ರುತಿಯೂ ಅಹುದು; ಸ್ಮೃತಿಯೂ ಅಹುದು
ವ್ಯಾಪಕವೂ ವಿಶ್ವಮೌಲಿಕವೂ ಆದ ವಿದ್ವಾಂಸರ ಅಭಿಪ್ರಾಯಗಳು ಅವಿನಾಶಿಯೂ ಚಲನಶೀಲವೂ ಆದ ಜಾನಪದವನ್ನು ಸೂತ್ರೀಕರಿಸಿ ಹೀಗೆ ಹೇಳಬಹುದು.
  • ಜಾನಪದ ನಿಂತ ನೀರಲ್ಲ; ಸ್ವಾರ್ಥಮೂಲವಾದದ್ದೂ ಅಲ್ಲ, ಸಂಚಲನೆ, ಪರಿವರ್ತನೆ, ಸ್ವೀಕಾರ, ಕೊಳ್ಳುಕೊಡು ಅದರ ಮೂಲ ಮಂತ್ರ.
  • ಜಾನಪದ ಎನ್ನುವುದು ಒಂದು ಜನತೆಯ ಗ್ರಂಥಸ್ಥವಲ್ಲದ ಮೊತ್ತ ಹಾಗೂ ಅದನ್ನು ಕುರಿತ ವಿಜ್ಞಾನ. ಅಂದರೆ ಸಂಪ್ರದಾಯವನ್ನು ಕುರಿತ ವಿಜ್ಞಾನ.
  • ಮೌಖಿಕತೆ, ಪರಂಪರೆ, ಅನಾಮಧೇಯತೆ ಜಾನಪದದ ಮುಖ್ಯ ಲಕ್ಷಣಗಳು. ಜಾನಪದದಲ್ಲಿ ಕಂಠಸ್ಥ ಸಂಪ್ರದಾಯ ಮತ್ತು ಅದರ ಪ್ರಭಾವ ಪ್ರಮುಖವಾಗಿದೆ.
  • ಕೇಳುವುದು-ನೆನಪಿಡುವುದು, ನೋಡುವುದು-ಅನುಕರಣೆ ಮಾಡುವುದು ಎರಡು ಸೂತ್ರಗಳ ಮೇಲೆ ಜಾನಪದ ನಿಂತಿರುತ್ತದೆ.
  • ಜಾನಪದವು ವ್ಯಕ್ತಿಯ ಸೃಷ್ಟಿಯಾಗಿರದೆ ಸಮಷ್ಟಿಯ ಸೃಷ್ಟಿಯಾಗಿರುತ್ತದೆ. ಒಬ್ಬನ ಸೃಷ್ಟಿ ಜನಪದರ ಕೈಯಲ್ಲಿ ಪುನರ್ಸೃಷ್ಟಿಯಾಗುತ್ತದೆ.
  • ಜಾನಪದ ಪ್ರಾಚೀನ ಹಾಗೂ ನಾಗರಿಕ ಸಮಾಜಗಳೆರಡರಲ್ಲೂ ಇರುತ್ತದೆ.

    ಭಾರತದಲ್ಲಿ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯ ಆರಂಭವಾದುದು ಬ್ರಿಟಿಷರಿಂದ ಭಾರತದ ಜಾನಪದದ ಮೊದಲ ಸಂಗ್ರಹ ಕೃತಿಯಾದ Annals and Antiquities of Rajasthanಅನ್ನು ಕ್ರಿ..1829 ಕರ್ನಲ್ ಟಾಡ್ ಪ್ರಕಟಿಸಿದನು. ಕ್ರಿ..1816ರಲ್ಲಿ ಅಬ್ಬೆ ಡುಬಾಯ್ Hindu Manners, Customs and Ceremonies ಎಂಬ ಗ್ರಂಥವನ್ನು ಪ್ರಕಟಿಸಿದರು. ಭಾರತೀಯ ಸಂಸ್ಕೃತಿ ಮತ್ತು ಜಾನಪದ ಅಧ್ಯಯನದ ದೃಷ್ಟಿಯಿಂದ ಗಮನಾರ್ಹ ಕೃತಿಯಾದಬಂಗಾಳದ ಗಾದೆಗಳುಕೃತಿಯನ್ನು ಕ್ರಿ.. 1932ರಲ್ಲಿ ರೆವೆರೆಂಡರ್ ಮಾರ್ಡಿನ್ ಪ್ರಕಟಿಸಿದರು. ಅದೇ ವರ್ಷ ಸಿ.. ಗೋವರ್ ಇಂಡಿಯಾದ ಜನಪದ ಗೀತೆಗಳು ಎಂಬ ಕೃತಿಯನ್ನು ಪ್ರಕಟಿಸಿದರು.
     ಕರ್ನಾಟಕದಲ್ಲೂ ಜಾನಪದದ ಸಂಗ್ರಹ ಮತ್ತು ಅಧ್ಯಯನ ಕಾರ್ಯಕ್ಕೆ ಮೊದಲು ಚಾಲನೆ ನೀಡಿದವರು ಆಂಗ್ಲ ಪಾದ್ರಿಗಳೇ. ಕನ್ನಡದ ಮೊದಲ ಜನಪದ ಸಾಹಿತ್ಯ ಸಂಗ್ರಹಜನಪದಗೀತೆಯನ್ನು ಕ್ರಿ.. 1871ರಲ್ಲಿ ಚಾಲ್ರ್ಸ್ ಗೋವರ್ ಪ್ರಕಟಿಸಿದರು. ಕ್ರಿ.. 1885ರಲ್ಲಿ ಫ್ಲೀಟರ್ ಲಾವಣಿಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಕನ್ನಡಿಗರ ಪ್ರಥಮ ಹಾಗೂ ಉತ್ಕøಷ್ಟ ಗೀತಗಳ ಸಂಗ್ರಹವಾದಗರತಿಯ ಹಾಡುಕೃತಿಯನ್ನು ಕ್ರಿ..1931ರಲ್ಲಿ ಹಲಸಂಗಿ ಸೋದರರಾದ ಕಾಪಸೆರೇವಣ್ಣ, ಸಿಂಪಿಲಿಂಗಣ್ಣ ಮತ್ತು ಮಧುರಚನ್ನರು ಜನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಕ್ರಿ.. 1933ರಲ್ಲಿಹಳ್ಳಿಯ ಹಾಡುಗಳುಸಂಗ್ರಹವನ್ನು ವಿಠೋಭ ವೆಂಕನಾಯಕರು, ‘ಹುಟ್ಟಿದ ಹಳ್ಳಿ ಹಳ್ಳಿಯ ಹಾಡುಸಂಗ್ರಹವನ್ನು ಅರ್ಚಕ ಬಿ. ರಂಗಸ್ವಾಮಿ ಅವರು ಪ್ರಕಟಿಸಿದರು. ಗೊರೂರು ಮತ್ತು ಬಿ. ಎಂ. ರಂಗಸ್ವಾಮಿಯವರಿಂದ ಕ್ರಿ.. 1938ರಲ್ಲಿಹಳ್ಳಿಯ ಹಾಡುಗಳುಜನಪದ ಗೀತೆಗಳ ಸಂಗ್ರಹ ಪ್ರಕಟವಾಯಿತು. ಮತಿಘಟ್ಟ ಕೃಷ್ಣಮೂರ್ತಿ, ಜೀ.ಶಂ.ಪರಮಶಿವಯ್ಯ, ಗೊ.ರು.ಚನ್ನಬಸಪ್ಪ, ಹೆಚ್.ಎಲ್.ನಾಗೇಗೌಡ, ಮುದೇನೂರು ಸಂಗಣ್ಣ, ಕ್ಯಾತನಹಳ್ಳಿ ರಾಮಣ್ಣ ಮುಂತಾದ ಅನೇಕ ವಿದ್ವಾಂಸರು ಜಾನಪದ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ದುಡಿದರು. ಕ್ರಿ. 1966 ಕನ್ನಡ ಜಾನಪದ ಇತಿಹಾಸದಲ್ಲಿ ಅತಿ ಪ್ರಮುಖವಾದ ವರ್ಷವಾಗಿದೆ. ಪ್ರೊ.ದೇ.ಜವರೇಗೌಡರ ಪ್ರಯತ್ನದಿಂದ ಜಾನಪದ ಅಧ್ಯಯನ ಖಚಿತ ರೂಪುರೇಷೆಯನ್ನು ಪಡೆದುಕೊಂಡಿತು. ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಲೇಖಕರ ಸಮ್ಮೇಳನವು ನಡೆದಜನಪದ ಸಾಹಿತ್ಯ ಗೋಷ್ಠಿಯಲ್ಲಿಡಾ. ಹಾ.ಮಾ ನಾಯಕರುಜನಪದ ಸಾಹಿತ್ಯ ಅದರ ಸ್ವರೂಪಎಂಬ ಪ್ರಬಂಧವನ್ನು ಮಂಡಿಸಿದರುವೈಜ್ಞಾನಿಕ ದೃಷ್ಟಿಯಿಂದ ಇದು ಮಹತ್ವದ್ದೆನಿಸಿದೆ. ಫೋಕ್ಲೋರ್(Folk Lore) ಎಂಬ ಆಂಗ್ಲ ಭಾಷೆಯ ಪದಕ್ಕೆ ಪರ್ಯಾಯವಾಗಿಜಾನಪದಎಂಬ ಖಚಿತವಾದ ಪದವನ್ನು ಸೂಚಿಸಿ ಜಾನಪದ ಅಧ್ಯಯನಕ್ಕೆ ದಾರಿದೀಪವಾದರು. ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿಜಾನಪದಐಚ್ಛಿಕ ವಿಷಯವಾಗಿ ಜಾರಿಗೆ ಬಂದಿತು.
   ಸಾಮಾನ್ಯತೆ, ಸಾಮೂಹಿಕತೆ, ಸರಳತೆ, ಸಜೀವತೆ, ಸೋಪಜ್ಞತೆಯಿಂದ ಕೂಡಿರುವ ಜಾನಪದದ ಮುಖ್ಯ ಲಕ್ಷಣಗಳು ಇಂತಿವೆ.
     ಕಂಠಸ್ಥ ಸಂಪ್ರದಾಯ : ಜನಪದ ಸಾಹಿತ್ಯ ನೋಡಿ ಕಲಿಯುವಂಥದಲ್ಲ, ಕೇಳಿಯೇ ಕಲಿಯುವಂಥದ್ದು. ತೋಂಡಿತನ ಇದರ ಜೀವ. ವಾಚಿಕ, ಮೌಖಿಲ, ಥೋಡೀ ಎಂದೆಲ್ಲಾ ಹೆಸರುಗಳಿದೆ. ಅನಕ್ಷರಸ್ಥರ ಸಮಾಜದಲ್ಲಿ ಕಂಠಸ್ಥ ಸಂಪ್ರದಾಯದ ಪಾತ್ರ ಹಿರಿದು. ಗೀತೆ, ಕಥೆ, ಗಾದೆ, ಒಗಟು, ಪುರಾಣ, ಐತಿಹ್ಯ, ಭಾಷೆ, ನಂಬಿಕೆ, ಆಚರಣೆ, ಕಲೆ, ವೈದ್ಯ, ಮಾಟ, ಮಂತ್ರ, ವೃತ್ತಿ ಎಲ್ಲವೂ ಅನುಕರಣೆಯಿಂದ ಕಲಿತು ಮತ್ತು ನೆನಪಿನಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ.
ಸಾಮೂಹಿಕ ಪುನರ್ಸೃಷ್ಟಿ: ಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತು. ಅಜ್ಞಾತ ಕವಿಯೊಬ್ಬನ ರಚನೆ ನೂರು ಜನರ ಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆ. ನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.
   ವ್ಯಾಪಕತೆ : ಜಾನಪದ ಜನತೆಯ ಸರ್ವತೋಮುಖ ಅಭಿವ್ಯಕ್ತಿಯಾದ್ದರಿಂದ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನಿಖರವಾಗಿ ಇದರ ವ್ಯಾಪ್ತಿಯನ್ನು ಗುರುತಿಸಲು ವಿದ್ವಾಂಸರಿಗೇ ಸಾಧ್ಯವಾಗಿಲ್ಲ. ಇದು ಸಮುದ್ರದಷ್ಟು ವಿಸ್ತಾರವಾಗಿಯೂ ಆಕಾಶದಷ್ಟು ಎತ್ತರವಾಗಿಯೂ ಇದೆ.
   ಅವಿನಾಶಿ : ಜಾನಪದಕ್ಕೆ ಸಾವಿಲ್ಲ. ಅದು ಚಿರಂತನ. ತನ್ನಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಚೈತನ್ಯದಿಂದಾಗಿ ಅತ್ಯಾಧುನಿಕ ಸಂಸ್ಕೃತಿಯಲ್ಲಿಯೂ ತನ್ನ ರೂಪವನ್ನು ಉಳಿಸಿಕೊಳ್ಳುವ ಅಂತಃಶಕ್ತಿಯನ್ನು ಹೊಂದಿದೆ.
   ಪರಂಪರೆ : ರಾಹುಕಾಲ ನೋಡುವುದು, ವಿನಾಯಕನನ್ನು ಪೂಜಿಸಿ ಕೆಲಸ ಆರಂಭಿಸುವುದು. ಹೀಗೆ ಹಿಂದಿನಿಂದ ರೂಢಿಯಲ್ಲಿರುವುದನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಬರುತ್ತಿರುವುದೇ ಇದಕ್ಕೆ ಸಾಕ್ಷಿ.
    ಸರಳತೆ-ಸ್ಪಷ್ಟತೆ : ಮುಚ್ಚು ಮನಸ್ಸಲ್ಲ, ಬಿಚ್ಚುಮನಸ್ಸು. ನೇರ ಮಾತಿನ ಅಭಿವ್ಯಕ್ತಿ. ಎಲ್ಲವೂ ಸರಳ. ಕೃತಕತೆ, ನಯ ನಾಜೂಕು, ತಂತ್ರ ಕುತಂತ್ರಗಳು ಇಲ್ಲಿಲ್ಲ. ಕೊಂಕು, ವ್ಯಂಗ್ಯ, ಕಟಕಿ, ಬೌದ್ಧಿಕ ಚಮತ್ಕಾರ ಇಲ್ಲ.
    ಪರಿವರ್ತನಶೀಲತೆ : ಜನಪದ ಹಾಡು ಹಾಡುವುದಕ್ಕಾಗಿ ರಚಿಸಿದ ಗೀತೆಗಳಲ್ಲ, ಹಾಡುವಾಗಲೇ ಸೃಷ್ಟಿಗೊಳ್ಳುತ್ತದೆ. ಹಾಡುಗಾರ, ಪ್ರದರ್ಶನಕಾರ, ಕವಿ ಮೂರೂ ಒಬ್ಬನೇ ಆಗಿರುತ್ತಾನೆ. ಇಷ್ಟವಾಗುವ ಅಂಶಗಳನ್ನು ಅನಂತರದ ಹಾಡುಗಾರಿಕೆಯಲ್ಲಿ ಹೆಚ್ಚಾಗಿ ಸೇರಿಸುತ್ತ ಹೋಗುತ್ತಾರೆ. ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಮತ್ತಷ್ಟು ಮಾರ್ಪಾಡುಗಳಾಗುತ್ತಾಹೋಗುತ್ತವೆ.  ಸಾಮೂಹಿಕ ಪುನರ್ಸೃಷ್ಟಿಗೆ ಒಳಗಾಗುವುದರಿಂದ ಪರಿವರ್ತನೆ ಮತ್ತು ರೂಪಾಂತರ ಸಹಜ.
   ವಿಶ್ವಮೌಲಿಕತೆ : ಜಗದ್ವ್ಯಾಪಿಯಾದುದು. ಜಾನಪದ ಸ್ವರೂಪ, ಲಕ್ಷಣ, ಸ್ವಭಾವ, ಗುಣಧರ್ಮಗಳನ್ನು ಕುರಿತು ವಿಶ್ವದಾದ್ಯಂತ ವಿದ್ವಾಂಸರು  ಹಿಂದಿನಿಂದಲೂ ಚಿಂತಿಸುತ್ತಾ ಬಂದಿದ್ದಾರೆ.  ಭಾರತದ ಕಥೆಗಳು ಯುರೋಪಿನಲ್ಲಿ ಸಂಚಾರ ಮಾಡ ಬಲ್ಲವು.
    ಸಾಮಾನ್ಯರ ವೇದವೆಂದೇ ಹೇಳುವ ಜಾನಪದ ಸಾಮಾನ್ಯರ ಸಾರ್ವಕಾಲಿಕ ವಿಶ್ವಕೋಶವೇ ಆಗಿರುವುದರಿಂದ ಇದರ ಅಧ್ಯಯನ ತುಂಬಾ ಮಹತ್ವದಾಗಿದೆ. ಯಾವುದೇ ವಿಷಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವಾಗ  ಕ್ಷೇತ್ರಕಾರ್ಯ (ಸಾಮಗ್ರಿಗಳ ಸಂಗ್ರಹ), ವರ್ಗೀಕರಣ (ವಿಂಗಡಣೆ), ವಿಶ್ಲೇಷಣೆ (ವ್ಯಾಖ್ಯಾನ) ಮೂರು ಹಂತಗಳನ್ನು ಬಳಸಬೇಕಾಗುತ್ತದೆ, ಜಾನಪದ ಕ್ಷೇತ್ರವೂ ಇದಕ್ಕೆ ಹೊರತಲ್ಕ. ಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಲು ಜಾನಪದದ ವರ್ಗೀಕರಣ ಅತ್ಯಂತ ಮುಖ್ಯವಾಗುತ್ತದೆ. ಹೆಚ್ಚು ಸಂಕೀರ್ಣವೂ, ಬಹು ವೈವಿಧ್ಯಮಯವೂ ಆದ ಜಾನಪದವನ್ನು ವರ್ಗೀಕರಿಸುವುದು ಬಹಳ ಕಠಿಣ ಕಾರ್ಯವಾಗಿದೆ. ಯಾವ ಆಧಾರದ ಮೇಲೆ ವಿಂಗಡಿಸಿದರೂ ಸಮರ್ಪಕವಾಗಿ ವಿಂಗಡಿಸಲು ಸಾಧ್ಯವೇ ಇಲ್ಲ.
   ಸಾಮೂಹಿಕ ಪುನರ್ಸೃಷ್ಟಿ: ಜಾನಪದ ವ್ಯಷ್ಟೀಕೃತವಾದರೂ ಸಮಷ್ಟಿಯ ಸ್ವತ್ತು.  ಅಜ್ಞಾತ ಕವಿಯೊಬ್ಬನ ರಚನೆ ನೂರು ಜನರ ಬಾಯಲ್ಲಿ ಮಾರ್ಪಾಡಾಗಿ ಜನತೆಯ ಕೃತಿಯಾಗಿ ಬಿಡುತ್ತದೆ.  ನಿರಂತರ ಸಾಮೂಹಿಕ ಪುನರ್ ಸೃಷ್ಟಿಗೆ ಒಳಗಾಗುತ್ತಿರುತ್ತದೆ.       
    ಕತೆಗಳು ಮತ್ತು ಸಂಪ್ರದಾಯಗಳು, ಹಾಡುಗಳು – ಕಥಾನಾತ್ಮಕ ಲಾವಣಿಗಳು, ಭಾವಗೀತೆಗಳು, ಕೆಲಸದ ಹಾಡುಗಳು-ಆಟದ ಹಾಡುಗಳು-ಮಕ್ಕಳ ಹಾಡುಗಳು, ಒಗಟು-ಗದೆ-ಹೇಳಿಕೆಗಳು-ಮಾಂತ್ರಿಕ ನುಡಿಗಳನ್ನು ಒಳಗೊಂಡ ಶಾಬ್ದಿಕ ಜಾನಪದ ಎಂದೂ, ನಿರ್ದಿಷ್ಟ ಕಾಲದ ಆಚರಣೆಗಳು(ಕೆಲವು ಹಬ್ಬಗಳು), ವ್ಯವಸಾಯ ಸಂಬಂಧಿ ಆಚರಣೆಗಳು, ಮೂಢನಂಬಿಕೆಗೆ ಸಂಬಂಧಿಸಿದನ್ನು ಆಚರಣೆಗಳು ಎಂದು ಕರೆದರು.
     ನಿರಂತರವಾಗಿ ಚಲನಶೀಲತೆಯುಳ್ಳ ಸಂವಹನ ಮಾಧ್ಯಮವಾಗಿರುವ ಜನಪದ ಸಾಹಿತ್ಯ ಭಾಷಾ ಸಾಹಿತ್ಯ ಚರಿತ್ರೆಯಲ್ಲೇ ಪ್ರಾಚೀನವಾದುದು. ವಾಚಿಕ ಜಾನಪದ, ಜಾನಪದದ ವಾಙ್ಮಯ ರೂಪ ಎಂದು ಗುರುತಿಸುವ ಜನಪದ ಸಾಹಿತ್ಯ ಜಾನಪದ ಕ್ಷೇತ್ರದ ಒಂದು ವಿಭಾಗ ಮಾತ್ರವಾಗಿದೆ. ಜನಪದ ಸಾಹಿತ್ಯದಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳನ್ನು ಕಾಣುತ್ತೇವೆ
                                                                  ಜನಪದ ಗೀತೆ
                                                                  ಜನಪದ ಕಥೆಗಳು
                                                                  ಒಗಟುಗಳು
                                                                  ಗಾದೆಗಳು       
       ವಸ್ತು ವೈವಿಧ್ಯ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಜನಪದ ಸಾಹಿತ್ಯದಲ್ಲಿ ವೈವಿಧ್ಯಮಯವಾ ಜೀವನಾನುಭವವು ಗದ್ಯ ಮತ್ತು ಪದ್ಯಗಳೆರಡರಲ್ಲೂ ರಚಿತವಾಗಿದೆ. ಅಭಿವ್ಯಕ್ತಿಯ ವೈವಿಧ್ಯತೆಯನ್ನು ಹೊಂದಿರುವ ಜನಪದ ಸಾಹಿತ್ಯದ ವರ್ಗೀಕರಣ ಅಷ್ಟು ಸುಲಭವಲ್ಲ. 
       ಆರ್.ಎಸ್.ಬಾಗ್ಸ್ ನ ಚತುರ್ಮುಖ ವಿಭಜನೆಯ ವಿಭಜನಾ ಕ್ರಮದಲ್ಲಿ 
                                                                 ಸಾಹಿತ್ಯದ ಬಗೆ, 
                                                                 ಭಾಷಿಕ ಬಗೆ, 
                                                                 ವೈಜ್ಞಾನಿಕ ಬಗೆ, 
                                                                  ಕ್ರಿಯಾತ್ಮಕ ಬಗೆ
       ಇವುಗಳಲ್ಲಿ ಜನಪದ ಸಾಹಿತ್ಯದ ರೂಪಗಳು ಗೋಚರಿಸುತ್ತವೆ. ಸಾಹಿತ್ಯದ ಬಗೆಗಳಲ್ಲಿ ಗೀತೆ, ಕಥೆ, ಪುರಾಣ, ಐತಿಹ್ಯಗಳು ಸೇರಿದರೆ, ಭಾಷಿಕ ಬಗೆಯಲ್ಲಿ ಗಾದೆ, ಒಗಟು, ಒಡಪು ಇತ್ಯಾದಿಗಳು, ವೈಜ್ಞಾನಿಕ ಬಗೆಯಲ್ಲಿ ನಂಬಿಕೆ, ಸಂಪ್ರದಾಯ, ಮಾಟ ಮಂತ್ರ, ವೈದ್ಯ ಮುಂತಾದವು ಸೇರುತ್ತವೆ.
      ರವೀಂದ್ರನಾಥ ಠಾಕೂರರು ಹೇಳಿರುವಂತೆ ‘ಎಲ್ಲಾ ಕಾವ್ಯಗಳಂತೆ ಜನಪದ ಗೀತೆಗಳ ಗುಣದಲ್ಲಿ ಬೇರೆ ಬೇರೆ ಮಟ್ಟಗಳಿವೆ. ಪೌರಾಣಿಕ ನದಿ ಮಂದಾಕಿನಿಯಂತೆ ನಿಜವಾದ ಕವಿ ಪ್ರತಿಭೆಯಿಂದ ಹೊರಹೊಮ್ಮುವ ಜೀವವಾಹಿನಿ ಅಪ್ರಾಪ್ಯಲೋಕದಲ್ಲಿ ಉಗಮಗೊಳ್ಳುತ್ತದೆ.’
      ವಸ್ತು ವೈವಿಧ್ಯತೆಯಿಂದ ಕೂಡಿ ಪೂರ್ವಾರ್ಜಿತ ಆಸ್ತಿಯಂತಿರುವ ಕಥಾಕೋಶವು  ಡಾ. ದೇ. ಜವರೇಗೌಡರು ಹೇಳಿರುವಂತೆ ಚಂಡಿ ಹಿಡಿಯುವ ಕಣ್ಣಿಗೆ ನಿದ್ದೆ ಹತ್ತದಿರುವ ದೇಹಾಲಸ್ಯದಿಂದ ನರಳುವ ಮಗುವಿಗೆ ಕಥೆ ಸನ್ಮೋಹನಾಂಜನವಾಗುತ್ತದೆ. ಕಥಾಶ್ರವಣ ರೋಗಿಗೆ ವೈದ್ಯವಾಗುತ್ತದೆ. ದಡ್ಡನಿಗೆ ವಿದ್ಯೆಯಾಗುತ್ತದೆ. ದುಡಿಮೆಗಾರನಿಗೆ ಚೇತೊಹಾರಿಯಾಗುತ್ತದೆ. ದುಷ್ಟನಿಗೆ ಶಿವಶಕ್ತಿಯಾಗುತ್ತದೆ. ಸೋಮಾರಿಗೆ ಚೈತನ್ನದಾಯಿಯಾಗುತ್ತದೆ. ರಸಿಕನಿಗೆ ರಸಾಯನವಾಗುತ್ತದೆ. ಒಡೆಯ-ಆಳು, ದೊರೆ-ಮಂತ್ರಿ, ರೈತ-ಯೋಧ, ಸನ್ಯಾಸಿ-ಸಂಸಾರಿ, ಹೆಂಗಸು-ಗಂಡಸು ಎಂಬ ಭೇದವಿಲ್ಲದೆ ಕಥೆ ಸರ್ವರನ್ನು ಏಕರೀತಿಯಾಗಿ ತೃಪ್ತಿಪಡಿಸುತ್ತದೆ. ಅದು ಬಾಳಿನ ಬವಣೆಯನ್ನು ಮರೆಸುತ್ತದೆ. ಮಾನಸಿಕ ಯಾತನೆಯನ್ನು ಒರೆಸುತ್ತದೆ. ಕೇಳುಗನಿಗೆ ಕೇಳುವ ಕುತೂಹಲವಿರುವಂತೆ ಹೇಳುಗನಿಗೆ ಹೇಳುವ ಹವ್ಯಾಸವಿರುತ್ತದೆ.
ಜನಪದ ಸಾಹಿತ್ಯದಲ್ಲಿ ಜನಪ್ರಿಯವಾದ ಪ್ರಮುಖವಾದ ಮತ್ತೆರಡು ಪ್ರಕಾರವಿದೆ. ಅವೇ ಗಾದೆ ಮತ್ತು ಒಗಟುಗಳು.
ಪ್ರತಿನಿತ್ಯ, ಪ್ರತಿಕ್ಷಣ ವೈವಿಧ್ಯಮಯವಾದ ಅನುಭವವನ್ನು ನೀಡುತ್ತಿರುವ ಚಲನಶೀಲ ಬದುಕಿನ ಪರಿಣಾಮ ಹಲವರ ಮೇಲಾಗಿ, ಹಲವರ ಅನುಭವ ಒಬ್ಬರ ಬಾಯಲ್ಲಿ ಹರಳುಗಟ್ಟಿ ಸಮುದಾಯದ ಸ್ಮøತಿಪಟಲದಲ್ಲಿ ಭದ್ರವಾಗಿ ನಿಂತು ಬಿಡುತ್ತದೆ. ಅನುಭವಾಧಾರಿತವಾದನುಡಿಗಳು  ಗಹನವಾದ ಅರ್ಥ ಶ್ರೀಮಂತಿಕೆಯಿಂದ ಹೊರಹೊಮ್ಮುತ್ತವೆ. ನಿತ್ಯದ ಬದುಕಿನಲ್ಲಿ ಬಳಕೆಯಾಗುವ ಈ ಮಾತುಗಳನ್ನು ಜನಪದರು ಗಾದೆ ಎಂದು ಕರೆದರು. ನೂರಾರು ಮಾತುಗಳಲ್ಲಿ ಹೇಳಬಹುದಾದ ಬದುಕಿನ ಅನುಭವವು ಸಾರವತ್ತಾಗಿ, ಸಂಕ್ಷಿಪ್ತವಾಗಿ, ನೀತಿಬೋಧಕವಾಗಿ ಕೇಳುಗರ ಮನಸ್ಸಿಗೆ ಆಹ್ಲಾದಕರವಾಗಿಯೂ ಮನಮುಟ್ಟುವಂತೆಯೂ ಒಂದೆರಡು ಮಾತಿನಲ್ಲಿ ನಿರೂಪಣೆಯಾಗಿರುತ್ತದೆ.
     ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು,’ ಆಡುಮುಟ್ದ ಸೊಪ್ಪಲ್ಲ ಗಾದೆ ಹೇಳದ ವಿಷಯವಿಲ್ಲ,’ ‘ಹಸಿಗೋಡೆಯಲ್ಲಿ ಹರಳು ಮೆಟ್ಟಿದಂತೆ,’ ‘ಆಕಾರದಲ್ಲಿ ಬಿಂಧು ಅರ್ಥದಲ್ಲಿ ಸಿಂಧೂ,’ ‘ರೂಪದಲ್ಲಿ ವಾಮನ ಅರ್ಥದಲ್ಲಿ ತ್ರಿವಿಕ್ರಮ,’ ಮುಂತಾದ ಗಾದೆಯನ್ನು ಕುರಿತಾದ ಗಾದೆಗಳೇ ಗಾದೆಯ ಮಹತ್ವವನ್ನು ಎತ್ತಿ ಹಿಡಿಯುತ್ತವೆ. 
       ವೇದಗಳು ಅಕ್ಷರ ಬಲ್ಲವರಿಗೆ ಮಾತ್ರ ಸೀಮಿವಾದರೆ, ಗಾದೆ ಸಕಲರ ಸೊತ್ತು. ಗಾದೆಗಳು ವೇದದ ಜ್ಞಾನದಂತೆ ನಿರ್ದಿಷ್ಟವಾದುದಲ್ಲ, ಕಾಲ ಕಾಲಕ್ಕೆ ಬೆಳೆಯುತ್ತಾ ಹೋಗುವ ಜ್ಞಾನ ಶಾಖೆಯಾಗಿದೆ.
       ಡಾ. ದೇ.ಜವರೇಗೌಡರು ತಮ್ಮ ‘ಜಾನಪದ ಅಧ್ಯಯನ’ ಎಂಬ ಗ್ರಂಥದಲ್ಲಿ ಹೇಳುವಂತೆ ಕೆಲವೇ ಕೆಲವು ಅರ್ಥಗರ್ಭಿತವಾದ ಮಾತುಗಳುಳ್ಳ ಚಿಕ್ಕದೂ ಚೊಕ್ಕವಾದದ್ದು ಆದ ವಾಕ್ಯವೇ ಗಾದೆ. ಗದ್ಯ ಮತ್ತು ಪದ್ಯಗಳ ಲಕ್ಷಣವನ್ನು ಅರ್ಥಪೂರ್ಣವಾಗಿ ಮೇಳೈಸಿಕೊಂಡ ವಿಶಿಷ್ಟ ಪ್ರಕಾರವದು.’
       ಸಂಸಂಸ್ಕೃತದ ‘ಗಾಥಾ’ ಶಬ್ದದ ತದ್ಭವವೇ ‘ಗಾದೆ’ಯಾಗಿದೆ ಎನ್ನುತ್ತಾರೆ. ನಾಣ್ಣುಡಿ ಎಂಬ ಅಚ್ಚ ಕನ್ನಡ ಶಬ್ದ ‘ಗಾದೆ’ಯ ಅರ್ಥವನ್ನು ಧ್ವನಿಸುತ್ತದೆ. ಗಾದೆಗೆ ಬಳಕೆಯಲ್ಲಿರುವ ಸಂವಾದಿ ಶಬ್ದಗಳು ಹೀಗಿವೆ: ಲೋಕೋಕ್ತಿ, ಪ್ರಾಚೀನೋಕ್ತಿ, ಸಾಮತಿ, ಸೂಕ್ತಿ, ಸೂತ್ರ, ಸಾರೋಕ್ತಿ, ಹೇಳಿಕೆ, ಉದ್ಧರಣೆ, ವಿಧಿ, ನಿಯಮ, ಪ್ರಮಾಣ, ಸುಭಾಷಿತ, ನಾಣ್ನುಡಿ ಇತ್ಯಾದಿ. 
ಮಾನವ ಜಗತ್ತನ ಸಮಸ್ತವನ್ನೂ ಅಡಗಿಸಿಕೊಂಡು ವಿಶಾಲವ್ಯಾಪ್ತಿಯನ್ನು ಹೊಂದಿರುವ ಗಾದೆಯ ಅರ್ಥ ಹಾಗೂ ಲಕ್ಷಣಗಳನ್ನು ಒಂದೇ ಸೂತ್ರದಲ್ಲಿ ಹಿಡಿದಿಡುವುದು ಕಷ್ಟ. ಬೇರೆ ಬೇರೆ ದೇಶದ ಜನತೆಯ ಹಾಗೂ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ನೋಡಿದಾದ ಗಾದೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. 
      ಕನ್ನಡದ ಜನತೆ: ‘ಗಾದೆ ವೇದಕ್ಕೆ ಸಮಾನ’
      ದ.ರಾ. ಬೇಂದ್ರೆ : ‘ಗಾದೆ ಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ, ವಿವೇಕ ಜಾಗೃತಿ ಮಾಡುವ ಸುಭಾಷಿತಗಳು.’
      ರಾಗೌ- ‘ಗಾದೆಯೆಂದರೆ ಸದ್ಯೋಜಾತ ನುಡಿಗಟ್ಟು; ಸೂಕ್ತ ಸಂದರ್ಭದಲ್ಲಿ ತಾಳಿದ ಯೋಗ್ಯ ನಿರ್ಣಯಗಳು.’
      ಮಾಸ್ತಿ ವೆಂಕಟೇಶ್ ಅಯ್ಯಂಗಾರ್ : ‘ಜನಾಂಗದಲ್ಲಿ ಪ್ರಚಾರದಲ್ಲಿರುವ ತಿಳಿವು ತನ್ನ ಮನಸ್ಸಿನಲ್ಲಿ ಬಿದ್ದಾಗ ನಾಲ್ಕು ಮಾತಿನಲ್ಲಿ ಘನಿಸಿ ಮುತ್ತಿನಂತಾಗುತ್ತದೆ. ಹಲವರ ಭಾವ ಒಬ್ಬನ ಮಾತಿನಲ್ಲಿ ಕಂಡು ಆ ಮಾತು ಹಲವರ ಮಾತಾಗುತ್ತದೆ.  ಗಾದೆಗಳನ್ನು ನೋಡಿದರೆ ಜನಾಂಗಗದ ಮನಸ್ಸು ಎಂಥದೆಂದು ಊಹಿಸಲು ಸಾಧ್ಯವಾಗುವುದಕ್ಕೆ ಇದೇ ಕಾರಣ.’
      ಗೊರೂರು ರಾಮಸ್ವಾಮಿ ಅಯ್ಯಂಗಾರ್ ; ಸತ್ಯ, ಗಾದೆ, ಮೂರ್ಖ ಈ ಮೂರನ್ನೂ ಎದುರಿಸಲಾಗದು. ಗಾದೆ ದೇವ ಭೇರಿ’ 
      ಎ.ಕೆ. ರಾಮಾನುಜಂ ಅವರು ‘ಗಾದೆ’ ಮಾತು ಜನತೆಯ ಮನಸ್ಸನ್ನು ಒಂದು ಮುಖದಲ್ಲಿ ಬಿಂಬಿಸುತ್ತದೆ. ಮತ್ತೊಂದು ಮುಖದಲ್ಲಿ ಆಳುತ್ತದೆ. ಅವರ ಅನುದಿನದ ನಂಟುಗಳನ್ನು ನಡೆಸುತ್ತದೆ. ಗಂಟುಗಳನ್ನು ಬಿಡಿಸುತ್ತದೆ.’
      ಅರಿಸ್ಟಾಟಲ್ ; ಗಾದೆಗಳು ಪ್ರಾಚೀನ ತತ್ವಶಾಸ್ತ್ರದ ಪಳೆಯುಳಿಕೆಗಳು’
      ಸ್ಕಾಟ್ ಜನತೆ : ಕೆಲವರು ಹೇಳಿದಾಗ ಅದು ಸತ್ಯವಿರಬಹುದು, ಆದರೆ ಎಲ್ಲರೂ ಹೇಳುತ್ತಿರುವಾಗ ಅದು ಸತ್ಯವಿರಲೇ ಬೇಕು’.
      ಐರಿಷ್ ಜನತೆ: ಗಾದೆಗಳನ್ನು ಯಾವ ಶಬ್ದಗಳೂ ಸೋಲಿಸಲಾರವು. ಗಾದೆಗಳು ದೊಡ್ಡ ಪುಸ್ತಕವಿದ್ದಂತೆ. ಅವುಗಳಿಂದ ಜನರ ಗುಣಧರ್ಮಗಳನ್ನು ಸುಲಭವಾಗಿ ಓದಬಹುದು. 
      ಫ್ರಾನ್ಸಿಸ್ ಬೇಕನ್ : ಜನಾಂಗದ ಕುಶಾಗ್ರತೆ, ಚತುರತೆ ಮತ್ತು ಶಕ್ತಿಯನ್ನು ಗಾದೆಗಳಲ್ಲಿ ಕಾಣಬಹುದು. 
ಜೆ.ಎ.ಕೆಲ್ಸೊ : ಸಂಕ್ಷಿಪ್ತತೆ, ವಿವೇಕಪೂರ್ಣತೆ ಅಥವಾ ಸಂವೇದನಾಶೀತೆ, ತೀಕ್ಷಣತೆ ಮತ್ತು ಜನಪ್ರಿಯತೆ –ಇವು ಗಾದೆಯ ನಾಲ್ಕು ಗುಣಗಳಾಗಿವೆ.
      ಥಾಮಸ್ ಫುಲ್ಲರ್ –‘ಸರ್ವೇಸಾಮಾನ್ಯವಾದ ಮತ್ತು ಗಮನಾರ್ಹವಾದ ಉಪಯೋಗದಲ್ಲಿನ ಅಡಕವೂ ಸಾರಭೂತವೂ ಆದ ಮಾತು ಅಥವಾಹೆಚ್ಚು ವಿಷಯಗಳನ್ನು ಕೆಲವೇ ಮಾತುಗಳಲ್ಲಿ ಭಟ್ಟಿ ಇಳಿಸಿದುದು ಗಾದೆ’
ಲಾರ್ಡ್ ಜಾನ್ ರಸೆಲ್ : ‘ಗಾದೆ ಹಲವರ ಜ್ಞಾನ, ಒಬ್ಬನ ವಿವೇಕ’
      ಗಾದೆಗಳನ್ನು ವಸ್ತುವಿನ ಆಧಾರದ ಮೇಲೆ ಹೀಗೆ ವರ್ಗೀಕರಿಸಬಹುದು. ಪೌರಾಣಿಕ ಗಾದೆಗಳು, ಚಾರಿತ್ರಿಕ ಗಾದೆಗಳು, ಐತಿಹ್ಯ ಗಾದೆಗಳು, ಸಾಮಾಜಿಕ ಗಾದೆಗಳು, ಸಾಹಿತ್ಯದ ಗಾದೆಗಳು, ವೃತ್ತಿಪರಗಾದೆಗಳು, ವೈದ್ಯಕೀಯ ಗಾದೆಗಳು, ಹವಾಮಾನ ಗಾದೆಗಳು, ಕೃಷಿ ಸಂಬಂಧಿ ಗಾದೆಗಳು. ಕೌಟುಂಬಿಕ ಗಾದೆಗಳು, ಸಾಂಪ್ರದಾಯಿಕ ಗಾದೆಗಳು, ನೀತಿ ಗಾದೆಗಳು, ಕಥನಾತ್ಮಕ ಗಾದೆಗಳು ಇತ್ಯಾದಿ.  
      ಸುಲಭವಾಗಿ ಅಳೆಯಲಾಗದ ಪ್ರಭಾವ, ಆಳ, ಅಗಲ, ಸೂಕ್ಷ್ಮಗಳನ್ನು ಹೊಂದಿರುವ ಗಾದೆಗಳು ಎಲ್ಲಾ ಕ್ಷೇತ್ರಗಳ ವಿದ್ವಾಂಸರಿಗೂ ಅಧ್ಯಯನಕ್ಕೆ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ. ಧ್ವನಿಪೂರ್ಣವಾದ ಶಬ್ದಸಂಪತ್ತು ಗಾದೆಗಳ ಕಸುವಾದ ಮಾತಿನಲ್ಲಿ ತುಂಬಿಕೊಂಡಿದೆ. ಕುರಿತೋದದೆಯು ಕಾವ್ಯ ಪ್ರಯೋಗ ಪರಿಣತಮತಿಗಳಾದ ಜನತೆ ಕಿರಿದರಲ್ಲಿ ಹಿರಿದರ್ಥವನ್ನು ಹೂರಣವಾಗಿಟ್ಟು ತೋರಿಸಲು ಬಳಸಿಕೊಂಡ ಸಾಧನವಾದ ಗಾದೆಯು ದೇಶ, ಕಾಲ, ಭಾಷೆ, ಸಂಸ್ಕøತಿ ಹಂಗಿಲ್ಲದೆ ಜನತೆಯ ವಿಶ್ವಕೋಶವಾಗಿದೆ.
     ಸೂತ್ರೀಕೃತ ಆಲೋಚನಾ ಪ್ರಕಾರವಾದ ಒಗಟುಗಳು ಜನಪದರ ವಿವೇಕ, ಜಾಣ್ಮೆ, ಸೃಜನಶೀಲತೆ, ಚತುರತೆ, ಪ್ರತಿಭೆ ಮತ್ತು ಕಲ್ಪನಾಶಕ್ತಿಗೆ ಹಿಡಿದ ಕನ್ನಡಿಯಂತಿವೆ. ಆಬಾಲವೃದ್ಧರೆಲ್ಲರನ್ನೂ ಆಕರ್ಷಿಸುತ್ತದೆ. ಇತರ ಜನಪದ ಸಾಹಿತ್ಯ ಪ್ರಕಾರಗಳಂತೆ ಒಗಟೂ ಸಹ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಎಲ್ಲರ ಮನೆಯಂಗಳದಲ್ಲೂ ರಾರಾಜಿಸುತ್ತಿದೆ. 
      ಸಮಸ್ಯಾತ್ಮಕವಾದ ಅಭಿವ್ಯಕ್ತಿ ಯಾಗಿರುವ ‘ಒಗಟು’ ಪದವು ಸಂಸ್ಕøತದ ಮುಂಡಿಗೆ, ಪ್ರಹೇಳಿಕಾ, ಪ್ರಶ್ನೆ,ಕೂಟ, ಬ್ರಹ್ಮೋದ್ಯ, ವಿವಾದ, ಸಮಸ್ಯಾ ಇತ್ಯಾದಿ ಪದಗಳಿಗೆ ಸಂವಾದಿಯಾಗಿದೆ. ಒಗಟಿನ ಭಾಷೆ ಸರಳವದುದಲ್ಲ, ಸಾಂಕೇತಿಕವಾದದ್ದು, ರಹಸ್ಯವನ್ನು ಕಾಪಾಡಿಕೊಂಡಿರುತ್ತದೆ. ಸುಲಭವಾಗಿ ಅರ್ಥವಾಗದ, ಜಟಿಲವಾದ, ನಿಗೂಡವಾದ ಸಮಸ್ಯೆಯಂತಿರುತ್ತವೆ. 
      ಒಗಟು ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಒಡಗತೆ, ಒಂಟು, ಒಡಚುಕತೆ ಇತ್ಯಾದಿ ಪದಗಳು ರೂಢಿಯಲ್ಲದ್ದರೂ ‘ಒಗಟು’ ಪದವೇ ಜನಪ್ರಿಯವಾಗಿರುವುದು. ‘ಒಗಟು’ ‘ಒಗೆ’ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ‘ಒಗೆ’ ಎಂದರೆ ಎಸೆ. ಒಡ್ಡು, ಹಾಕು ಇತ್ಯಾದಿ ಅರ್ಥಗಳಿವೆ. ಸಮಸ್ಯೆಯನ್ನು ಒಡ್ಡು, ಪ್ರಶ್ನೆಯನ್ನು ಎಸೆ, ಸವಾಲು ಹಾಕು ಎಂದರ್ಥದಲ್ಲಿ ಒಗಟು ಬಳಕೆಯಾಗುತ್ತಿದೆ.
       ಡಾ. ಸೊಮಶೇಖರ ಇಮ್ರಾಪುರರ ಅಭಿಪ್ರಾಯದಲ್ಲಿ ‘ ಗೂಡಾರ್ಥದ್ಯೋತಕವಾದ, ಸಾಂಕೇತಿಕತೆ, ಪ್ರತಿಮೆ, ರೂಪಕ ಇಲ್ಲವೆ ಸರಮಾಲೆ ಅನ್ಯೋಕ್ತಿಪ್ರಧಾನವಾದ, ಉಪಮಾನ ವಾಚ್ಯ ಉಪಮೇಯ ಗೌಪ್ಯವಾದ, ಉತ್ತಾರಾಪೇಕ್ಷಿಯಾದ ಚಿನ್ಮನಶೀಲ ಪರಂಪರಾಗತ ಅಭಿವ್ಯಕ್ತಿಯೇ ಒಗಟು’
        ಅಲೆಕ್ಸಾಂಡರ್ ಎಚ್. ಕ್ರಾಪೆಯವರು ವಾಕ್ ಸಂಪ್ರದಾಯದಲ್ಲಿ ಒಗಟೇ ಕೊನೆಯದು ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸಿ.ಎಫ್.ಪಾಟರ್ ಅವರು ‘ಪುರಾತನ ಮನಸ್ಸಿನ ಪ್ರಾಥಮಿಕ ಅಭ್ಯಾಸದ ಫಲವೇ ಒಗಟು ಎಂದಿದ್ದಾರೆ. ‘ಮಾನವನ ಶೈಶವಾವಸ್ಥೆಯಲ್ಲಿಯೇ ಒಗಟುಗಳು ಸೃಷ್ಟಿಯಾದವು’ ಎನ್ನುವ ಜೇಮ್ಸ್ ಎ. ಕೆಲ್ಸೋ ಅವರು ಹೇಳಿಕೆಯೂ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆ. ಅರಿಸ್ಟಾಟಲ್ ‘ಒಗಟಿಗೂ ರೂಪಕಕ್ಕೂ ನಿಕಟ ಸಂಬಂಧ. ರೂಪಕಗಳ  ಸರಣಿಯೇ ಒಗಟು ಎಂದಿದ್ದಾನೆ. 
        ದೇವುಡು ನರಸಿಂಹ ಶಾಸ್ತ್ರಿಗಳು ‘ಕಣ್ಣಾಮುಚ್ಚಾಲೆಯ ಕಾವ್ಯದ ಸ್ವರೂಪವೇ ಒಗಟು’ ಎಂದಿದ್ದಾರೆ.
       ಸಿ.ಪಿ. ಕೃಷ್ಣಕುಮಾರ್ ಅವರು ‘ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ವ್ಯಾಜದಿಂದ ಚಮತ್ಕಾರವಾಗಿ ವರ್ಣಿಸುವುದು, ಆವಸ್ತುವನ್ನು ಕಂಡು ಹಿಡಿಯುವಂತೆ ಹೇಳುವುದು ಒಗಟು’ ಎಂದಿದ್ದಾರೆ.
ಹಾ.ಮಾ.ನಾಯಕರು ‘ಇದು ಪ್ರಾಚೀನವಾದ ಸುವ್ಯವಸ್ಥಿತಗೊಂಡ ಆಲೋಚನೆಯ ಪಲವಾಗಿದೆ. ಒಗಟುಗಳ ಪ್ರಾಧಾನ ಗುರಿ ಬುದ್ಧಿಯ ಕಸರತ್ತು’ ಎಂದಿದ್ದಾರೆ.
       ರಾಮೇಗೌಡರು (ರಾಗೌ) ‘ಒಗಟು ಪ್ರಯತ್ನಪೂರ್ವಕ ಸೃಷ್ಟಿ ಪ್ರಜ್ಞಾಪೂರ್ವಕವಾದ ಸಾಹಿತ್ಯ ಕ್ರಿಯೆ. ವಾಸ್ತವ ಅರ್ಥವನ್ನು ಮುಚ್ಚಿಸುವ ವ್ಯಾಖ್ಯೆಯೇ ಒಗಟು. ಅನುಮಾನದ ಮೂಲಕ ಅರ್ಥಾನ್ವೇಷಣೆಗೆ ಹೊರಡಲು ಪ್ರೇರೇಪಿಸುವ ಸಂದಿಗ್ದಪ್ರಾಸಬದ್ಧ ರಚನೆ, ಕೂಡಲೇ ಕಾರಣ ಕೊಡಲಾಗದ ಸಮಸ್ಯೆ’ ಎಂದಿದ್ದಾರೆ.
ಗಾದೆಗಳು ಸಾಮಾನ್ಯವಾಗಿ ಉಪದೇಶವನ್ನು ಮುಖ್ಯ ಉದ್ದೇಶವಾಗಿಸಿಕೊಂಡರೆ, ಒಗಟುಗಳು ಜನಪದರ ಜಾಣ್ಮೆಯನ್ನು ಬಿಂಬಿಸುವ ಸಾಧನವಾಗಿವೆ.
       ಮಾತಿಗೆ ಮಾಧ್ಯಮವಾದ ಜನಪದ ಕಥೆ, ನೀತಿ, ಗಾದೆ, ಒಗಟು, ಲಾವಣಿ, ಮೊಲಾದ ಶಾಬ್ದಿಕ ಪ್ರಕಾರಗಳು, ಕ್ರಿಯೆಗೆ ಮಾಧ್ಯಮವಾದ ಸಂಪ್ರದಾಯ, ಆಚರಣೆ, ಕುಣಿತ, ಆಟಪಾಟ, ನಂಬಿಕೆ, ಪೂಜೆ ಮುಂತಾದವುಗಳು ಜನಪದ ಸಂಸ್ಕøತಿಯ ಅಂಗವಾಗಿವೆ. ಸಮಸ್ತ ಜನಪದ ಸಂಸ್ಕøತಿಯ ತಿಳುವಳಿಕೆಯೇ ಜಾನಪದ. ಜಾನಪದದ ಅರಿವು ಮನುಕುಲದ ಅರಿವೇ ಆಗಿದೆ.
ಪ್ರಾಕ್ತನ ಶಾಸ್ತ್ರಜ್ಞ ಫ್ರಾನ್ಸಿಸ್ ಗ್ರಾಸ್ ಹೇಳಿರುವಂತೆ ‘ಒಂದು ದೇಶದ ಜಾನಪದ ಇತಿಹಾಸವನ್ನು ತಿಳಿಯದವ ರಾಜನೂ ಆಗಲಾರ, ರಾಜಕಾರಣಿಯೂ ಆಗಲಾರ’
         ನಾವು ಎಷ್ಟೇ ಮುಂದುವರಿದವರಾದರೂ ನಮ್ಮ ಪೂರ್ವೀಕರ ಪ್ರಾಚೀನ ಜನತೆಯ ಸಾಹಿತ್ಯ, ಸಂಸ್ಕøತಿ, ಸಂಪ್ರದಾಯ, ಪರಂಪರೆಯನ್ನು ಕಡೆಣಿಸಲಾಗದು. ನಮ್ಮ ಪೂರ್ವಿಕರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವದ ಜಾನಪದ ಸಂಪತ್ತು ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ. ನಿತ್ಯ ನಿರಂತರ ಕೆಲಸದ ಶ್ರಮದ ತೀವ್ರತೆಯನ್ನು ಕುಗ್ಗಿಸಿ, ಬದುಕಿನ ಏಕತಾನತೆಯನ್ನು  ಹೋಗಲಾಡಿಸಿ ಮನಸ್ಸನ್ನು ಮುದಗೊಳಿಸುತ್ತದೆ. ಮಲ್ಲಿಗೆಯಂತೆ ಮನವನ್ನು ಅರಳಿಸಿ ಶ್ರೀಗಂಧದಂತೆ ಸುವಾಸನೆಯನ್ನು ಪಸರಿಸುವಂತೆ ಮಾಡಿ ಸಾಮರಸ್ಯದಿಂದ ಬದುಕಿ ಬಾಳಲು ನೆರವಾಗುವಂತೆ ವ್ಯಕ್ತಿತ್ವವನ್ನು ರೂಪಿಸುತ್ತದೆ. 
ಬದುಕಿನ ಎಲ್ಲಾ ಮುಖಗಳನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಸೃಷ್ಟಿಯೇ ಆಗಿರುವ ಜಾನಪದದ ಅಧ್ಯಯನ ಊಹಾತ್ಮಕ ಶಾಸ್ತ್ರವಲ್ಲ; ವಾಸ್ತವಿಕ ಆಧಾರಗಳ ಮೇಲೆ ನಿಂತಿರುವ ವಿಜ್ಞಾನ. ಆಧುನಿಕ ಬದುಕನ್ನು ವ್ಯವಸ್ಥೆಯನ್ನಾಗಿ ರೂಪಿಸಿಕೊಳ್ಳಲು  ಜಾನಪದದ ಅರಿವು ಸಹಾಯಕವಾಗುತ್ತದೆ.
         ಮನುಷ್ಯನ ಸಂಸ್ಕøತಿಯ ಪರಿಪೂರ್ಣ ಅರಿವಿಗೆ ಜಾನಪದ ಅಧ್ಯಯನ ಅತ್ಯಗತ್ಯ.  ಸಂಸ್ಕøತಿಯ ಅಧ್ಯಯನದಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಜಾನಪದವನ್ನು ಹೊರತುಪಡಿಸಿ ಸಂಸ್ಕøತಿಯ ಅಧ್ಯಯನ ಸಾಧ್ಯವೇಯಿಲ್ಲ ಎನ್ನುವುದು ನಿರ್ವಿವಾದ. 
        ಜಾನಪದವು ಕಲೆಯೂ ಹೌದು, ಶಾಸ್ತ್ರವೂ ಹೌದು. ಜಾನಪದ ಅಧ್ಯಯನ ಒಂದು ಶಾಸ್ತ್ರವಲ್ಲ; ಹಲವು ಶಾಸ್ತ್ರಗಳ ಸಮಷ್ಟಿ. ಯಾರೂ ತಮ್ಮ ಶಾಖೆಯದೆಂದು ಹಕ್ಕು ಚಲಾಯಿಸುವಂತಿಲ್ಲ. ಎಷ್ಟೋ ವಿಷಯಗಳ ಮೇಲೆ ಜಾನಪದ ಅಮೂಲ್ಯವಾದ ಬೆಳಕು ಚೆಲ್ಲುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಸಾಧನವಾಗಿರುವ ಜಾನಪದ ಪುರಾಣ, ಐತಿಹ್ಯಗಳ ಅರಿವಿಗೆ ಸಹಾಯಕವಾಗಿದೆ. ಸಾಹಿತ್ಯ ವಿದ್ವಾಂಸರು, ಭಾಷಾ ವಿದ್ವಾಂಸರು, ಮಾನವ ಶಾಸ್ತ್ರೀಯ ವಿದ್ವಾಂಸರು ಜಾನಪದವನ್ನೇ ಅವಲಂಬಿಸಿದ್ದಾರೆ.
ಜಾನಪದದೊಂದಿಗೆ ಸಾಹಿತ್ಯಯು ಬಿಡಿಸಲಾಗದ ಅತ್ಯಂತ ಗಾಢವಾದ ಸಂಬಂಧವನ್ನು ಹೊಂದಿದೆ. ಜಗತ್ತಿನ ಶ್ರೇಷ್ಟ ಕೃತಿಗಳಾದ ರಾಮಾಯಣ, ಮಹಾಭಾರತ, ಇಲಿಯಡ್, ಗಿಲ್ಗಮೇಶ್, ಕಥಾಸರಿತ್ಸಾಗರ---ಮುಂತಾದವುಗಳಲ್ಲಿ ಜನಪದ ಸಾಹಿತ್ಯದ ಹಿನ್ನೆಲೆಯನ್ನು ಗುರುತಿಸಬಹುದು.
        ಶ್ರಮಿಕ ವರ್ಗಗಳ ವಾಸ್ತವಗಳು ಮತ್ತು ಆಕಾಂಕ್ಷೆಗಳ ಅಭಿವ್ಯಕ್ತಿಯೇ ಆಗಿರುವ ಜಾನಪದವು ಗ್ರಾಂಥಿಕ ಸಾಹಿತ್ಯರಚನೆಯು ಸೊರಗಿ ಸತ್ವಹೀನವಾದಾಗಲೆಲ್ಲಾ ಸಾಹಿತ್ಯಕ್ಕೆ ಚೈತನ್ಯವನ್ನು ನೀಡಿ ಪುನರುಜ್ಜೀವನಗೊಳ್ಳುವಂತೆ ಮಾಡಿದೆ.  
ನಾಗರಿಕತೆಯ ಕೆಳಹಂತದ ಜನರ ಪಾಲಿಗೆ ಜಾನಪದ ವಿಶ್ವಕೋಶವೇ ಆಗಿದ. ಎಲ್ಲಾ ವರ್ಗದ ಬಾಹ್ಯ ಮತ್ತು ಆಂತರಿ ಜೀವನವ್ಯಾಪಾರಗಳು, ನಂಬಿಕೆ ನಡವಳಿಕೆಗಳು, ಆಚಾರ ವಿಚಾರಗಳು ಜಾನಪದ ಪರಿಧಿಯಲ್ಲಿ ಸಮಾವೇಶಗೊಳ್ಳುತ್ತವೆ. 
ಸಂಸ್ಕøತಿಯನ್ನು ಊರ್ಜಿತಗೊಳಿಸುವಲ್ಲಿ ಜಾನಪದವು ಪ್ರಮುಖ ಪಾತ್ರವಹಿಸುತ್ತದೆ. ಸಂಸ್ಕøತಿಯ ಎಲ್ಲಾ ಅಂಶಗಳನ್ನೂ ಸೂಕ್ಷವಾಗಿ ಅಭಿವೃದ್ಧಿಗೊಳಿಸುತ್ತದೆ. ಗಾದೆಗಳು ಸಂಸ್ಕøತಿಯ ಮೌಲ್ಯವನ್ನು ಬಿತ್ತರಿಸುತ್ತವೆ. ಒಗಟುಗಳು ನಿಸರ್ಗದ ನಿಗೂಢ ಲಕ್ಷಣಗಳನ್ನು ಅರಿಯುವಲ್ಲಿ, ಭೌತಿಕ ಸಂಸ್ಕೃತಿ ಮತ್ತು ಸಾಮಾಜಿಕ ಸಂಸ್ಕøತಿಯ ಲಕ್ಷಣವನ್ನು ತಿಳಿಯುವಲ್ಲಿ ಸಹಕಾರಿಯಾಗಿವೆ. ಆಬಾಲವೃದ್ಧರಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸು ಜನಪದ ಕಥೆಗಳು, ಸಾಂಸ್ಕøತಿಕ ಮೌಲ್ಯಗಳನ್ನು ಎತ್ತಿ ಹಿಡಿದು, ಜನಸಮುದಾಯ ದಾರಿತಪ್ಪದಂತೆ ಎಚ್ಚರಿಸಿ ಸಮಾಜವನ್ನು ನಿಯಂತ್ರಿಸುವ, ಆಪತ್ತಿನಿಂದ ಪಾರುಮಾಡುವ ಚೈತನ್ಯವನ್ನು ಹೊಂದಿವೆ. 
        ಜನಪದ ಗೀತೆಗಳು, ಲಾವಣಿಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿವೆ.ಪರಕೀಯರ ದಾಳಿಯನ್ನು, ದಬ್ಬಾಳಿಕೆಯನ್ನು ವಿರೋಧಿಸಿ, ಐಕ್ಯತೆ, ಪ್ರಾಂತೀಯತೆ, ರಾಷ್ಟ್ರೀಯತೆ ಮುಂತಾದ ಭಾವನೆಗಳನ್ನು ಉದ್ದೀಪನಗೊಳಿಸಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಿಂದ ಪಾರಾಗುವಲ್ಲಿ ಉಪಯುಕ್ತವಾಗಿವೆ. 
ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ನೀಡಬಲ್ಲ, ನಿಸರ್ಗದ ವಿಚಿತ್ರಗಳನ್ನು ಗುರುತಿಸಿ ಅಪಾಯದಿಂದ ಪಾರುಮಾಡಬಲ್ಲ ಜ್ಞಾನಸಂಪತ್ತು ಜಾನಪದದಲ್ಲಡಗಿದೆ. ಸುನಾಮಿ ದುರಂತದಿಂದ ಪಾರಾದ ಅಂಡಮಾನ್ ನಿಕೋಬಾರ್ ದ್ವೀಪದ ಬುಡಕಟ್ಟಿನವರೇ ಇದಕ್ಕೆ ಸಾಕ್ಷಿ.
        ಪ್ರೇಮ, ತ್ಯಾಗ, ಮಾತ್ಸರ್ಯ, ಸಾಹಸ, ಛಲ, ದ್ವೇಷ, ಬಂಜೆತನ, ಹೆಣ್ಣಿನ ಪಾತಿವ್ರತ್ಯ, ಮನುಷ್ಯನ ಜಿಪುಣತನ, ಕಷ್ಟ ಕಾರ್ಪಣ್ಯ, ಸೋಲು, ನಿರಾಸೆ ಇತ್ಯಾದಿ ಮನುಷ್ಯನ ನಿತ್ಯ ಜೀವನದ ಸಮಸ್ತವನ್ನೂ ಅಭಿವ್ಯಕ್ತಗೊಳುತ್ತದೆ. ಜೀವನದ ಆದರ್ಶವನ್ನು ಉಳಿಸುವ, ನೈತಿಕ ಮೌಲ್ಯವನ್ನು ಎತ್ತಿ ಹಿಡಿಯುವ ಮೌಲ್ಯಾನುಸರಣೆಯ ಸಂದೇಶನ್ನು ಸಾರುವ, ಆದರ್ಶ ಸಮಾಜವನ್ನು ಉಳಿಸಿ ಬೆಳೆಸುವ ಸಾಮಥ್ರ್ಯವು ಜಾನಪದ ಸಂಸ್ಕøತಿಯಲ್ಲಿ ಅಡಕವಾಗಿದೆ.
       ಜಾನಪದದಲ್ಲಿರುವುದೆಲ್ಲ ಜೀವನದಲ್ಲಿದೆ. ಜೀವನದ ಸಮಸ್ತವೂ ಜಾನಪದದಲ್ಲಿದೆ. ಜೀವನವೇ ಜಾನಪದ ಜಾನಪದವೇ ಜೀವನವೆಂದಾದರೆ, ಯಾವ ಸಂಕಷ್ಟಗಳೂ ಹತ್ತಿರ ಸುಳಿಯವು. ಮೋಹ-ದಾಹ, ಮದ-ಮತ್ಸರ, ತಳಮಳ-ತಲ್ಲಣಗಳು ತಾವಾಗಿಯೇ ದೂರ ಸರಿಯುತ್ತವೆ. ಬಾಳು ಬಂಗಾರವಾಗುತ್ತದೆ.
                                               ಆಚಾರಕರಸಾಗು ನೀತಿಗೆ ಪ್ರಭುವಾಗು
                                               ಮಾತಿನಲ್ಲಿ ಚೂಡಮಣಿಯಾಗು ನನಕಂದ 
                                               ಜ್ಯೋತಿಯೆ ಆಗು ಜಗಕೆಲ್ಲ||
      ನಮ್ಮ ಜನಪದ ಮಾತೆಯರ ಮುತ್ತಿನಂತಹ ಮಾತಿನ ಆಶೀರ್ವಾಚನಗಳ ಜನಪದ ಭಂಡಾರವೇ ಹೇರಳವಾಗಿರುವಾಗ ನಮ್ಮ ಬಾಳು ಬಂಗಾರವಾಗದೆ ಇನ್ನೇನು. 
                                               ಮುತ್ತು ಮಾಣಿಕ ಬೇಡ ಮತ್ತೆ ಸಂಪದ ಬೇಡ
                                               ಸುತ್ತ ಕೋಟೆಯ ವೈಭವ ಬೇಡ ನನ್ನವ್ವ
                                               ಸುತ್ತೆಲ್ಲ ಜನಪದ ಹಾಡಿರಲಿ||
ಎಂದು ಹಾಡುತ್ತಾ ಜನಪದ ಸೊಗಡನ್ನು ಸುತ್ತೆಲ್ಲ ಪಸರಿಸ ಬಯಸಿದ್ದಾರೆ ನಮ್ಮ ಜನಪದರು.


1 comment:

  1. ಮೇಡಂ ನಮಸ್ತೆ,ನಿಮ್ಮ ಲೇಖನವನ್ನು ನನ್ನ ಕನ್ನಡ ಜಾನಪದ ಬ್ಲಾಗಲ್ಲೂ ಹಾಕಿರುವೆ. ಗಮನಿಸಿ.
    http://kannadajaanapada.blogspot.com/2016/06/blog-post_18.html

    -ಅರುಣ್ ಜೋಳದಕೂಡ್ಲಿಗಿ
    9901445702

    ReplyDelete