Wednesday 16 September 2015

ಇಂದಿನ ಬದುಕು

ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು
ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು
ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು
ಅಜ್ಜಅಜ್ಜಿಯ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು

ನಾಗಾಲೋಟಕೆ ನಲುಗಿ ನರಳುತಿದೆ ಬದುಕು
ಯಾಂತ್ರಿಕತೆಯಲಿ ಯಂತ್ರವಾಗಿದೆ ಬದುಕು
ತಾಂತ್ರಿಕತೆಗೆ ತತ್ತರಿಸಿ ಅತಂತ್ರವಾಗಿದೆ ಬದುಕುಆ ಆಧುನಿಕತೆಯ ಆರ್ಭಟಕೆ ಆತಂಕಗೊಂಡಿದೆ ಬದುಕು

ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ
ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ
ಮುಖವಾಡ ನಿಜಮುಖವ ಮರೆಮಾಚುತಿದೆ
ಅಹಮಿಕೆಯ ಹಮ್ಮಿನಲಿ ಎಲ್ಲ ಬರಡಾಗುತಿದೆ

ಬಣ್ಣ ಬಣ್ಣದ ಬಾಯಿ ಮಾತಿಗೆ ಬರಗಾಲವಿಲ್ಲ
ಪರರ ಪರಿಶ್ರಮವ ಪರಿಗಣಿಸಿ ಮನ್ನಿಸುವರಿಲ್ಲ
ಪದವಿ ಪ್ರತಿಷ್ಟೆ ಬಿರುದಿನ ಹಿಂದೆ ಬಿದ್ದಿರುವರೆಲ್ಲ
ಭ್ರಷ್ಟತೆಯು ಸ್ಪಷ್ಟವಾಗಿದ್ದರು ಬಡಿದೋಡಿಪರಿಲ್ಲ

ಮುತ್ತಿಟ್ಟು ತುತ್ತಿಟ್ಟು ಮುದ್ದಿಸಿದ ಮನಗಳಿಲ್ಲವಾಗಿವೆ ಇಂದು
ಕಷ್ಟ ಸುಖದಲಿ ಇಂಬುಗೈದಾ ಹೃದಯಗಳು ಕಾಣದಾಗಿವೆ ಇಂದು
ನಮ್ಮವರು ತಮ್ಮವರು ಎಂಬ ವಾತ್ಸಲ್ಯ ದೂರವಾಗಿದೆ ಇಂದು
ಅಕ್ಕರೆಯ ನುಡಿ ಕಲಿಸಿ, ತಿದ್ದಿ ತೀಡಿದ ಪರಂಪರೆ ಮರೆಯಾಗಿದೆ ಇಂದು

ಪ್ರೀತಿ ವಾತ್ಸಲ್ಯ ಸಹನೆ ಸಹಕಾರ ಬೇಕಿದೆ ಇಂದು
ಅಹಮಿಕೆಯ ಅಹಂಕಾರ ಅಳಿಯ ಬೇಕಿದೆ ಇಂದು
ಶಾಂತಿ ಸೌಹಾರ್ದ ಸಹಬಾಳ್ವೆ ಬೇಕಿದೆ ನಮಗಿಂದು
      ಅದು ಬರುವುದು ಎಂದು ?
      ಬೇಗನೇ ಬರಲೆಂದು ಆಶಿಸುವೆವು ನಾವಿಂದು

No comments:

Post a Comment