Wednesday 12 August 2015

ಸಹಸ್ರ ಚಂದ್ರ ದರ್ಶಿ ಪಂಡಿತ್‍ ಜೀ


ಎಂಬತ್ತು ವಸಂತಗಳ ಚೆಲುವ ಸವಿದು
ಸಹಸ್ರ ಚಂದ್ರಮನ ದರ್ಶನವ ಗೈದು
ಸರಳ ಸಜ್ಜನಿಕೆಯಿಂ ಎಲ್ಲೆಡೆಯು ನಡೆದು
ಅನುಭವಾಮೃತವ ಅನ್ಯರಿಗೆ ಧಾರೆಯೆರೆದು
ಬಸವ ಸಿದ್ಧಾಂತವ ಅರೆದು ಕುಡಿದು
ರಾಜ ಗಾಂಭೀರ್ಯದಿಂ ಮೆರೆದು
ಶಾಸ್ತ್ರಿತನದಿಂ ಪಾಂಡಿತ್ಯವಾ ಪಡೆದು
ಬಸವರಾಜಶಾಸ್ತ್ರಿಗೆ ಅನ್ವರ್ಥವಾದಾತ
ಕಾಯಕ ಸಿದ್ಧಾಂತಕೆ ಸದಾ ಬದ್ಧರಾಗಿ
ನೇಮ ನಿಷ್ಠೆಯಿಂ ಸಕಲ ಕಾರ್ಯವೆಸಗಿ
ನಡೆ ನುಡಿಗಳಲ್ಲಿ ಸದಾ ಒಂದಾಗಿ
ಹಾಸ್ಯಲೇಪಿತ ಮೃದು ಮಧುರ ನುಡಿಗೆ ಹೆಸರಾಗಿ
ಗಟ್ಟಿಮಾತಿನಿಂದ ಬೋಧನೆಯನೆಸಗಿ
ಎಲ್ಲರ ಮನದಲೂ ನೆಲೆಯ ಪಡೆದಾತ
ನೀತಿ ನಿಯಮಪಾಲನೆಯನಿಷ್ಟಪಟ್ಟು
ಊಟ ಉಪಚಾರದಲಿ ಕಟ್ಟುನಿಟ್ಟು
ಉಡುಗೆ ತೊಡುಗೆಯಲಿ ಅಚ್ಚುಕಟ್ಟು
ಕಾರ್ಯಸಾಧನೆಯಲಿ ಬಿಗಿಪಟ್ಟು
ಅವೇ ಇವರ ಬಾಳಿನ ನೆಲೆಗಟ್ಟು
ಬಹುಭಾಷಾ ವಿಶಾರದ
ಸರಳ ಸಜ್ಜನಿಕೆಯ ಗಣಿ
ನಿರಾಡಂಬರದ ಸದ್ಗುಣಿ
ನಿರಹಂಕಾರಿ, ನಿರುಪದ್ರವಿ
ಶುಭ್ರ ಶ್ವೇತವಸ್ತ್ರಧಾರಿ
ಸಾಹಿತ್ಯಾಸಕ್ತ, ಪತ್ರಿಕೋದ್ಯಮಿ

ಚಾಕಚಕ್ಯತೆಯಿಂದಲಿ
ಚತುರೋಪಾಯದಿಂದಲಿ
ಚುರುಕು ನಿರ್ಧಾರದಿಂದಲಿ
ಚಾಣಾಕ್ಷತನವ ಮೆರೆಸಿದಾತ
ಭಯದಲೂ ನಿರ್ಭಯದಿಂದಿದ್ದು
ಬಯಸಿದುದಬಿಡದೆ ಪಡೆದಾತ
ವೃತ್ತಿ ಬಾಂಧವನಿವ
ವೃತ್ತಿಗೆ ನಿಷ್ಠನಾಗಿದ್ದನಿವ
ವೃತ್ತಿಗೆ ತಕ್ಕ ಪ್ರವೃತ್ತಿಯ ಬೆಳೆಸಿಕೊಂಡವನಿವ
ವೃತ್ತಿ ಪ್ರವೃತ್ತಿಯಿಂ ಜನಾನುರಾಗಿಯಾದವನಿವ
ವೃತ್ತಿ ಬಾಂಧವರಿಂ ಬುದ್ಧನೆನಿಸಿಕೊಂಡಾತನಿವ
ವಾಕ್ಪಟುತ್ವದಲಿ, ವಾಕ್ಚತುರತೆಯಲಿ
ನಿಷ್ಣಾತನಾಗಿಹಬಸವರಾಜ ಶಾಸ್ತ್ರಿಗಳಿಗೆ
ನಮ್ಮ ನೆಚ್ಚಿನ ಒಲುಮೆಯಪಂಡಿತ್ಜೀಗೆ
ಭಗವಂತ  ಸರ್ವಸಂಪದವ ಕರುಣಿಸಲೆನುತ
ಬೇಡುವೆವು ಬಯಸುವೆವು ನಾವೆಲ್ಲರೊಂದಾಗಿ

No comments:

Post a Comment