Tuesday 7 July 2015

ಗೊರೂರು ರಾಮಸ್ವಾಮಿ ಅಯ್ಯಂಗಾರ್: (ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧)


ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯಸೇವೆಯನ್ನು ಸಲ್ಲಿಸಿರುವ ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಲೇಖಕರಲ್ಲಿ ಅಗ್ರಗಣ್ಯರಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಪುಟ್ಟಗ್ರಾಮ ಗೊರೂರಿನಲ್ಲಿ ೧೯೦೪ ರ ಜುಲೈ 4ನೆಯ ದಿನಾಂಕದಂದು ಜನಿಸಿದರು. ‘ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಎಂದೇ ಪ್ರಖ್ಯಾತರಾದರು. ಗೊರೂರು ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರದಲ್ಲಿರುವುದರಿಂದಲೇ ಗೊರೂರರನ್ನು 'ಹೇಮಾವತಿ ತೀರದ ಗಾಂಧಿ' ಎಂದು ಕರೆಯುತ್ತಾರೆ. 
ಗೊರೂರಿನಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣಮುಗಿಸಿ, ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿದರು. ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಗಾಂಧೀಜಿಯವರ ಆಶ್ರಮವನ್ನು ಸೇರಿದರು. ಗುಜರಾತಿನ ವಿದ್ಯಾಪೀಠದಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ಸೃಜನಾತ್ಮಕ ಸಾಹಿತ್ಯ ಸೇವೆಯೊಂದಿಗೆ ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರಶಿಕ್ಷಣ, ಗ್ರಾಮ ಕೈಗಾರಿಕೆಗಳು, ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿರುವ ಗೊರೂರರು ಪ್ರವಾಸಕಥನಪ್ರಬಂಧಕಥೆಜೀವನಚಿತ್ರಕಾದಂಬರಿವಿಮರ್ಶೆಭಾಷಾಂತರ – ಹೀಗೆ ವಿವಿಧ ಪ್ರಕಾರಗಳಿಗೆ ಅಪಾರ ಕೊಡುಗಳನ್ನು ನೀಡಿದ್ದಾರೆ. ತಮ್ಮ ಕೃತಿಗಳ ಮೂಲಕ ಗ್ರಾಮೀಣ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಪರಿಚಯಿಸಿದ್ದಾರೆ. ಸ್ವಂತ ಸ್ಥಳವಾದ ಗೊರೂರುಗ್ರಾಮ ಮತ್ತು ಹೇಮಾವತಿನದಿಯನ್ನು ತಮ್ಮ ಕೃತಿಗಳ ಮೂಲಕ ಅಮರಗೊಳಿಸಿದ್ದಾರೆ. ನಾಡನ್ನು ನಗಿಸಿ ನಲಿಸಿದ್ದಾರೆ. ರಸಿಕರನ್ನು ನಗೆ ಕಡಲಿನಲ್ಲಿ ತೇಲಿಸಿದ್ದಾರೆ. ಜನತೆಗೆ ನಗುವುದನ್ನು ಕಲಿಸಿದ್ದಾರೆ.
     ಪಾಂಡಿತ್ಯವಿಮರ್ಶನಾ ಚಾತುರ್ಯ, ಮತ್ತು ಬಹುಮುಖ ಅಭಿರುಚಿಗಳು ಗೊರೂರರ ಕೃತಿಗಳಲ್ಲಿ ಅನಾವರಣಗೊಂಡಿವೆ. ಅಪರೂಪದ ಬರವಣಿಗೆಗಳೆನಿಸಿರುವ ಅವರ ಬಹುತೇಕ ಕೃತಿಗಳಲ್ಲಿ ನವಿರಾದ ಹಾಸ್ಯದೊಂದಿಗೆ ಸಮಾಜ ವಿಡಂಬನೆಯನ್ನು ಪ್ರಧಾನವಾಗಿ ಕಾಣಬಹುದು. ಗೊರೂರರ ಹಾಸ್ಯ ನಿರರ್ಗಳವೂ, ನಿರ್ಮಲವೂ ಆದುದು. ದಿನ ನಿತ್ಯದ ಅನುಭವ  ಹಾಗೂ ಪ್ರಾದೇಶಿಕ ಸನ್ನಿವೇಶಗಳನ್ನು ಹಾಸ್ಯಲೇಪದೊಂದಿಗೆ ವರ್ಣಿಸಿದ್ದಾರೆ. ಪ್ರಾದೇಶಿಕ ವಾಙ್ಮಯದ ಜೀವನ ಚಿತ್ರಣ ಪ್ರಾದೇಶಿಕವಾಗಿರುವಂತೆ ಪ್ರಾತಿನಿಧಿಕವೂ ಆಗಿದೆ. ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿ ಮತ್ತು ಸಂಗತಿಗಳಲ್ಲಿ ಹುದುಗಿರುವ ವಿಶೇಷತೆಯನ್ನು ರಸವತ್ತಾಗಿ ಬಣ್ಣಿಸಿದ್ದಾರೆ.  ಹಾಸ್ಯ ಕಣ್ಣಿನಿಂದಲೇ ಎಲ್ಲವನ್ನೂಎಲ್ಲರನ್ನೂ ಅವಲೋಕಿಸುವುದು ಅವರ ಸಹಜ ಸ್ವಭಾವವಾಗಿದೆ.
ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿದೆ. “ನಾನು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ”ಎಂಬ ಗೊರೂರರ ನುಡಿಗಳೇ ಅವರಲ್ಲಿ ಅಡಗಿರುವ ಅದ್ಭುತವಾದ. ಜಾನಪದ ಪ್ರಜ್ಞೆಯನ್ನೂ ಅವರ ನಂಬಿಕೆಯನ್ನೂ ಎತ್ತಿ ಹಿಡಿಯುತ್ತದೆ. ಬಹುತೇಕರು ಶುಷ್ಕವೆಂದೇ ಭಾವಿಸುವ ಜನಪದ ಜೀವನದಲ್ಲಿ ಎಂತಹ ಸ್ವಾರಸ್ಯವಿದೆ, ಅದ್ಭುತ ಚೆಲುವಿದೆ ಎಂಬುದನ್ನುನಮ್ಮ ಜನಪದರು ಎಂತಹ ರಸಿಕರೆಂಬುದನ್ನು ಗೊರೂರರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿದ್ದಾರೆ. 
ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ಅನುಕರಿಸಿ ಜೀವನದಲ್ಲಿ ಅಳವಡಿಸಿಕೊಂಡಂತೆ, ಆಧುನಿಕ ನಾಗರೀಕತೆಯ ಅತಿಯಾದ ಮೋಹದಿಂದ ಆಗುತ್ತಿರುವ ಸರ್ವನಾಶವನ್ನು ತಪ್ಪಿಸ ಬಹುದೆಂಬ ನಂಬಿಕೆಯು ದೃಢವಾಗುತ್ತದೆ. ಇಂದಿನ ಸಾಮಾಜಿಕ ಹಾಗೂ ಕೌಟುಂಬಿಕವಾದ ಅನೇಕ ಸಮಸ್ಯೆಗಳಿಗೆ ಜಾನಪದವೊಂದೆ ಪರಿಹಾರವನ್ನು ಒದಗಿಸಬಹುದೆಂಬ ಭಾವನೆಯೂ ಮೂಡದೆ ಇರದು.

 ಅಪ್ರತಿಮ ಗಾಂಧಿವಾದಿಗಳಾದ ಗೊರೂರರು ಸಾಹಿತ್ಯ ಸೇವೆಯ ಜೊತೆ ಜೊತೆಗೇ ದೇಶ ಸೇವೆಯ ಕೈಂಕರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ಗಾಂಧೀಜಿಯವರ ಆಶ್ರಮ ಸೇರಿದರು. ‘ಲೋಕಮಿತ್ರ’, ‘ಆಂದ್ರ ಪತ್ರಿಕೆ’, ‘ಭಾರತಿ’, ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ‘ಲೋಕಮಿತ್ರ ಪತ್ರಿಕೆ’ಗೆ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಕೆಂಗೇರಿಯ ಗುರುಕುಲಾಶ್ರಮದ ಮೂಲಕ ದಲಿತೋದ್ದಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಸಂಚಾಲಕರಾಗಿ ಖಾದಿ ಪ್ರಚಾರಮಾಡಿದರು. ೧೯೩೩ರಲ್ಲಿ ಗೊರೂರಿನಲ್ಲಿ ಮೈಸೂರು ಗ್ರಾಮಸೇವಾಸಂಘವನ್ನು ಸ್ಥಾಪಿಸಿದರು. ೧೯೪೨ ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದರು. ತುರಂಗವಾಸ (ಸೆರೆಮನೆ ವಾಸ)ವನ್ನೂ ಅನುಭವಿಸಿದರು. ಪ್ರಜಾಸರ್ಕಾರ ಸ್ಥಾಪನೆಗಾಗಿ ‘ಮೈಸೂರು ಚಲೋ’ ಚಳುವಳಿಯಲ್ಲಿ ಭಾಗವಹಿಸಿದರು. ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯ ವಿಧಾನ ಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. ಕರ್ನಾಟಕದ ಏಕೀಕರಣದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಹೀಗೆ ಗೊರೂರರು ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿದರು. ಹರಿಜನೋದ್ಧಾರ ಮತ್ತು ಗ್ರಾಮೋದ್ಧಾರಕ್ಕಾಗಿ ಶ್ರಮಿಸಿದರು.
60ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್   ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಹಲವು ದಶಕಗಳಿಂದ ಕನ್ನಡಿಗರಿಗೆ ಶುದ್ಧ ಸಂತೋಷದ ರಸದೌತಣವನ್ನು ಉಣಿಸುತ್ತಿವೆ.
ಪ್ರಮುಖ ಕೃತಿಗಳು:







ಲೇಖನ/ ಕಥಾ ಸಂಗ್ರಹಗಳು
·         ಹಳ್ಳಿಯ ಚಿತ್ರಗಳು,
·         ಗರುಡಗಂಬದ ದಾಸಯ್ಯ,
·         ನಮ್ಮಊರಿನ ರಸಿಕರು,
·         ಶಿವರಾತ್ರಿ,
·         ಕಮ್ಮಾರ ವೀರಭದ್ರಾಚಾರಿ,
·         ಬೆಸ್ತರ ಕರಿಯ,
·         ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು,
·         ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು,
·         ‘ಕಥೆಗಳು ಮತ್ತು ವಿನೋದ ಚಿತ್ರಗಳು
·         ‘ವೈಯಾರಿ’,
·         ‘ಉಸಬು’,
·         ‘ಗೋಪುರದ ಬಾಗಿಲು’,
·         ‘ಕನ್ಯಾಕುಮಾರಿ ಮತ್ತು ಇತರ ಕಥೆಗಳು’, 
·         ‘ಸಾಹಿತ್ಯ ರಶ್ಮಿ’ 
ಕಾದಂಬರಿಗಳು
·         ಹೇಮಾವತಿ,
·         ಪುನರ್ಜನ್ಮ,
·         ಮೆರವಣಿಗೆ,
·         ಊರ್ವಶಿ,
ಪ್ರಖ್ಯಾತ ಸಣ್ಣಕತೆಗಳು
·         ಬೂತಯ್ಯನ ಮಗ ಅಯ್ಯು,
·         ಮರೆಯಾದ ಮಾರಮ್ಮ .  
ಪ್ರಖ್ಯಾತ ಪ್ರಬಂಧಗಳು
·         ‘ಆಚಾರ ಕೆಟ್ಟರೂ ಆಕಾರ ಕೆಡಬಾರದು
·          ‘ಹಾರುವಯ್ಯ ಹಜಾಮನಾದುದು
·         ‘ಬೈಲಹಳ್ಳಿ ಸರ್ವೆ
·         ‘ಗರುಡಗಂಬದ ದಾಸಯ್ಯ’
·         ಸ್ವಾತಂತ್ರ್ಯವೇ ಧರ್ಮ
ಅನುವಾದ ಕೃತಿಗಳು
·         ಮಲೆನಾಡಿನವರು,
·         ಭಕ್ತಿಯೋಗ,
·         ಭಗವಾನ್ ಕೌಟಿಲ್ಯ,
ಪ್ರವಾಸ ಕಥನ
·         ಅಮೆರಿಕಾದಲ್ಲಿ ಗೊರೂರು
ಜನಪದ ತ್ರಿಪದಿಗಳ ಸಂಗ್ರಹ
·         ಹಳ್ಳಿಯ ಹಾಡು
ಸಂದ ಪ್ರಶಸ್ತಿ ಮತ್ತು ಗೌರವಗಳು
·         ೧೯69 ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
·         ೧೯೭೪ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.
·         ೧೯೮೦ ರಲ್ಲಿ ಅಮೆರಿಕಾದಲ್ಲಿ ಗೊರೂರು, ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಲಬಿಸಿತು.
·         ೧೯೮೨ ರಲ್ಲಿ ಸಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು.
·         ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದರು.
·         ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾದರು.
·         ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.
·         ದೇವರಾಜ ಬಹದ್ದೂರ್ ಪ್ರಶಸ್ತಿ ಪಡೆದರು.
ಅಭಿಮಾನಿಗಳು ಅರ್ಪಿಸಿದ ಅಭಿನಂದನಾ ಗ್ರಂಥಗಳು:
·         ಗೊರೂರು ಗೌರವ ಗ್ರಂಥ, 
·         ಸಂಸ್ಮರಣ ಗ್ರಂಥ,
·         ಹೇಮಾವತಿಯ ಚೇತನ
  ಗೊರೂರರ ಕೃತಿಗಳಲ್ಲಿ ವಾಸ್ತವತೆಯನ್ನು, ವೈಚಾರಿಕತೆಯನ್ನು ಕಾಣಬಹುದು. ಎಂತಹ ಸನ್ನಿವೇಶದಲ್ಲೂ ಗೊರೂರರ ಹಾಸ್ಯ ಪ್ರಜ್ಞೆ ಇಣುಕದೆ ಬಿಟ್ಟಿಲ್ಲ. ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ, ಎಲ್ಲ ಮನೋಭಾವದ, ಎಲ್ಲ ಸ್ತರಗಳ ಜನರೊಂದಿಗೆ ಗೊರೂರರು ಗ್ರಾಮದ ಜೀವನ ಶೈಲಿಯನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ. ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವುದಕ್ಕೆ ಒತ್ತು ಕೊಡುತ್ತಾ ಎಲ್ಲರ ನಡುವೆ ಸಾಮರಸ್ಯವನ್ನು ಮೂಡಿಸುತ್ತಾ ಸಮಷ್ಟಿಯ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಜೀವನದ ಅವಿಭಾಜ್ಯವೇ ಆಗಿರುವ ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು,  ಜನಪದ ಕಲೆಗಳು, ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಚಿತ್ರಿಸಿದ್ದಾರೆ. ಗ್ರಾಮೀಣ ಸಂಸ್ಕೃತಿಯ ವಿಶ್ವರೂಪ ದರ್ಶನವನ್ನು ಮಾಡಿಸಿದ್ದಾರೆ.
ಅತ್ಯಂತ ಧ್ವನಿಪೂರ್ಣವಾದ ಶೀರ್ಷಿಕೆಯನ್ನು ಹೊಂದಿರುವ ಗೊರೂರರ ಪ್ರವಾಸ ಕಥನ ‘ಅಮೆರಿಕದಲ್ಲಿ ಗೊರೂರು’ ಪೂರ್ವ ಪಶ್ಚಿಮಗಳನ್ನೂ ನಗರ ಗ್ರಾಮಗಳನ್ನೂ ಹಳತು ಹೊಸತನ್ನೂ ಸಂಕೇತಿಸುತ್ತದೆ.  ಈ ಕೃತಿಯಲ್ಲೂ ಹಾಸ್ಯಕ್ಕೇ ಸಿಂಹಪಾಲು, ಹಾಸ್ಯದ ಹೊನಲೇ ಹರಿದಿದೆ. ಘಟನೆಗಳ ನಿರೂಪಣೆ ಗೊರೂರರ ಆಲೋಚನಶೀಲತೆಗೆ ಸ್ಪಷ್ಟಸಾಕ್ಷಿಯಾಗಿವೆ.
     ನೋವು ಗೋಳುಗಳ ಹಿಂದೆ ಹೊಂಚುಹಾಕುತ್ತಿರುವ ನಗೆಯನ್ನು ಹಿಡಿಯುವುದೇ ಜೀವನದ ತಿರುಳೆಂಬುದು ಗೊರೂರರ  ಜೀವನದ ನಿಲುವಾಗಿತ್ತು. ಗೊರೂರನ್ನು ಕುರಿತ ಗಣ್ಯರ ನುಡಿಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿವೆ.
· “ಗೊರೂರರ ಕೃತಿಗಳು ಬರು ಬರುತ್ತ ಹಳ್ಳಿಗಳ ಮಹಾಭಾರತಗಳೇ ಆಗುತ್ತಿವೆ” - ವಿ.ಕೃ. ಗೋಕಾಕ್
· “ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು. ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ.” -ಕುವೆಂಪು
ಅಪರೂಪದ ಬರವಣಿಗೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವ ಅನುಪಮ ವ್ಯಕ್ತಿತ್ವದ ಗೊರೂರು ೧೯೯೧ ಸೆಪ್ಟೆಂಬರ್ 8 ರಲ್ಲಿ ನಿಧನರಾದರು. ಅವರ ಭೌತಿಕ ಶರೀರ ನಮ್ಮ ಮಧ್ಯದಲ್ಲಿಲ್ಲದಿದ್ದರೇನು? ಸಿ. ಪಿ. ಕೃಷ್ಣಕುಮಾರವರು ಹೇಳಿರುವಂತೆ ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ.  ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.
     ಅವರು ಉಳಿಸಿರುವ ಅಸ್ತಿಯನ್ನು ಮುಂದಿನ ಪೀಳಿಗೆಯು ಅನುಭವಿಸುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅವರ ಸಾಹಿತ್ಯವನ್ನೆಲ್ಲಾ ಓದಿ ಅರಗಿಸಿಕೊಳ್ಳೋಣ. ಇಂದಿನ ಯುವಪೀಳಿಗೆಗೆ ಅದರ ಸವಿಯನ್ನು ಸವಿಯುವಂತೆ ಮಾಡೋಣ. ಮುಂದಿನ ಪೀಳಿಗೆಗೆ ಗೊರೂರರ ಸಾಹಿತ್ಯ ಸಂಪತ್ತನ್ನು ಉಳಿಸಿ ವರ್ಗಾಯಿಸೋಣ.    
. ಪದ್ಮ
ಸಹಶಿಕ್ಷಕಿ
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ.
ಮಲ್ಲೇಶ್ವರಂ.
ಬೆಂಗಳೂರು.

  D¨sÁj:  

   ಗೊರೂರು ರಾಮಸ್ವಾಮಿ ಅಯ್ಯಂಗಾರರ ¥ÀĸÀÛPÀUÀ¼ÀÄ
   ಸಾಲು ದೀಪಗಳು 

   https://www.google.co.in/search?q=ಹೇಮಾವತಿ+ಜಲಾಶಯ
   https://www.google.co.in/search?q=ಗೊರೂರು+ರಾಮಸ್ವಾಮಿ
   http://kanaja.in/archives/9545

 
 

1 comment:

  1. ಇವರ ಇನ್ವಂದು ಪ್ರವಾಸ ಕವನವನ್ನು ಹೇಳುವಿರ
    Please tell me

    ReplyDelete