Wednesday 24 February 2016

ಗಾದೆಯ ವಿಸ್ತರಣೆ: ‘ಹಾಸಿಗೆ ಇದ್ದಷ್ಟು ಕಾಲು ಚಾಚು'.

ಗಾದೆಗಳಿಲ್ಲದ ದೇಶವಾಗಲಿ, ಭಾಷೆಯಾಗಲಿ ಇಲ್ಲವೇ ಇಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ. ಊಟಕ್ಕೆ ಉಪ್ಪು ಹೇಗೆ ಅಗತ್ಯವೋ ಹಾಗೆ ಗಾದೆಗಳು ಮಾತಿಗೆ ಅವಶ್ಯಕ. ಗಾದೆಗಳು ವಸ್ತುವೈವಿಧ್ಯತೆಯಿಂದ ಕೂಡಿದ್ದು, ಜನಸಾಮಾನ್ಯರ ಅನುಭವದ ನುಡಿಗಳಾಗಿವೆ. ಸಂಸ್ಕೃತಿ, ಸಂಪನ್ನತೆ ಹಾಗೂ ವಿಚಾರ ವೈಭವಕ್ಕೆ ಹೆಸರಾಗಿವೆ.
ಗಾದೆಗಳು ಪ್ರಜ್ಞಾಪೂರ್ವಕವಾಗಿ ರಚಿಸಿದ ಸಾಹಿತ್ಯ ಪ್ರಕಾರವಲ್ಲ; ಸಹಜವಾಗಿ ಮಾತಿನ ಓಘದಲ್ಲಿ ಸೃಷ್ಟಿಯಾಗಿ, ಪ್ರವಹಿಸುವಂತಹವು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವರು ಹೇಳಿರುವಂತೆ "ಗಾದೆಗಳು ಯಾವುದೇ ವಿದ್ವಾಂಸನೊಬ್ಬನ ಪರಿಶ್ರಮದ ಫಲವಲ್ಲ. ಅದು ಬೀದಿಯಲ್ಲಿ ಸಿಕ್ಕುವ ಜ್ಞಾನ. ಅಂದಂದಿನ ಅನುಭವಕ್ಕೆ ಅಲ್ಲಲ್ಲೇ ರೂಪುತಾಳಿ, ಬಾಯಿಂದ ಬಾಯಿಗೆ ಚಲಾವಣೆಯಾಗುತ್ತಾ ಅಂದಂದಿನ ಸಂದರ್ಭಕ್ಕೆ ಒದಗುವ ಕಾರಣದಿಂದ, ಗಾದೆಗಳು ಹುಟ್ಟಿ ಬೆಳೆದದ್ದು ಬೀದಿಯಲ್ಲೇ”.
The wisdom of many and the wit of one. – ‘ಗಾದೆ ಹಲವರ ಜ್ಞಾನ ಒಬ್ಬನ ವಿವೇಕ’.. ಗಾದೆ ಮಾತುಗಳ ಕಟ್ಟುವಿಕೆಯಲ್ಲಿ ಸಮುದಾಯದ ಆಗುಹೋಗುಗಳಲ್ಲಿ ಉಂಟಾಗುವ ಯಾವುದಾದರೊಂದು ಪ್ರಸಂಗ ಇಲ್ಲವೇ ಜೀವನದ ಏರಿಳಿತಗಳ ಅವಲೋಕನ ಕಂಡುಬರುತ್ತದೆ ಇಂತಹ ಗಾದೆಗಳಲ್ಲಿ ಜನಜನಿತವಾಗಿರುವ ಒಂದು ಗಾದೆ ‘ಹಾಸಿಗೆ ಇದ್ದಷ್ಟು ಕಾಲು ಚಾಚು'. ನಾಲ್ಕು ಪದಗಳಿಂದ ಕೂಡಿದ ಈ ಗಾದೆಯಲ್ಲಿ ಹಾಸಿಗೆಯ ಅಳತೆ ಮತ್ತು ಕಾಲು ಚಾಚುವಿಕೆ ಎಂಬ ಎರಡು ರೂಪಕಗಳಿವೆ. ‘ಹಾಸಿಗೆ ಇದ್ದಷ್ಟು’ ಎನ್ನುವುದು ನಮ್ಮ  ಸಾಮರ್ಥ್ಯವನ್ನು, ನಮಗಿರುವ ಮಿತಿಯನ್ನು, ದುಡಿದು ಗಳಿಸಬಹುದಾದ ಸಂಪತ್ತನ್ನು ಸೂಚಿಸುತ್ತದೆ. ಕಾಲು ಚಾಚುವುದು ಮಿತಿ ಮೀರದಂತೆ ವ್ಯವಹರಿಸ ಬೇಕೆಂಬುದನ್ನು ತಿಳಿಸುತ್ತದೆ. ಗಳಿಸಿಟ್ಟ ಅಥವಾ ಗಳಿಸ ಬಹುದಾದ ಧನ, ಕನಕ, ಸಂಪತ್ತಿನ ಮಿತಿಯನ್ನು ಮೀರಿ ದುಂದುಗಾರಿಕೆಯನ್ನು ಮಾಡಬಾರದು ಎಂಬ ಎಚ್ಚರಿಕೆಯ ಧ್ವನಿಯನ್ನು ಈ ಗಾದೆಯಲ್ಲಿ ಕಾಣಬಹುದು. ನಮ್ಮ ನಮ್ಮ ಮಿತಿಯೊಳಗೆ ಜೀವನ ಮಾಡುವುದನ್ನು ಕಲಿಯಬೇಕೆಂಬ ಕಿವಿಮಾತನ್ನೂ ಈ ಗಾದೆ ಹೇಳುತ್ತದೆ. ನಮ್ಮ ದುಡಿಮೆ ನಮ್ಮ ಖರ್ಚಿಗಿಂತ ಅಧಿಕವಾಗಿರಬೇಕು. ಸಂಪಾದನೆಗಿಂತ ಅಧಿಕ ಖರ್ಚು ಮಾಡಿದರೆ ಸಾಲದ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಸಾಲದ ನೆರಳಿನಲ್ಲೇ ಎಷ್ಟುದಿನ ಜೀವನ ಸಾಗಿಸಲು ಸಾಧ್ಯವಾಗುತ್ತದೆ? ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಬೆಳೆಯುತ್ತಾ ಹೋಗುತ್ತದೆ ಸಾಲದ ಹೊರೆಯಲ್ಲಿ ತತ್ತರಿಸಬೇಕಾಗುತ್ತದೆ. ಖರ್ಚಿಗೆ ಸಾಲ ಮಾಡುವ ಪರಿಸ್ಥಿತಿಯಿರುವಾಗ ಬಡ್ಡಿಯನ್ನು ಭರಿಸುವುದು ಹೇಗೆ? ಅದಕ್ಕಾಗಿ ಮತ್ತೆ ಸಾಲ. ಸಾಲದ ಶೂಲದ ಬಾದೆಗೆ ಗುರಿಯಾಗ ಬೇಕಾಗುತ್ತದೆ. ಸರ್ವಜ್ಞ ಹೇಳುವಂತೆ  "ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ".  
ನಮ್ಮ ಹಿರಿಯರು ಜೀವನಾನುಭವದಿಂದ ‘ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂದು ಹೇಳಿದ್ದಾರೆ. ಇರುವಷ್ಟರಲ್ಲಿ ನೆಮ್ಮದಿಯಾಗಿರುವುದನ್ನು ಕಲಿಯುವ  ಜೀವನ ಪಾಠವನ್ನು  ನಮಗೆ ಹೇಳುತ್ತಾ ಬಂದಿದ್ದಾರೆ. ನಮ್ಮ ಆದಾಯಕ್ಕೆ ತಕ್ಕಂತೆ ನಮ್ಮ ಖರ್ಚಿರಬೇಕೇ ಹೊರತು, ಬೇಕಾಬಿಟ್ಟಿಯಾಗಿ ಮನಬಂದಂತೆ ದುಂದುಗಾರಿಕೆಮಾಡುವುದಲ್ಲ. ನಾವು ಮಲಗುವ ಹಾಸಿಗೆ ಎಷ್ಟು ಉದ್ದ ಇದೆಯೋ ಅಷ್ಟು ಉದ್ದಕ್ಕೇ ಕಾಲು ಚಾಚಬೇಕೇ ಹೊರತು ಅದರಿಂದಾಚೆಗೆ ಕಾಲು ಚಾಚಬಾರದು. ಹಾಸಿಗೆಯ ಮೇಲೆ ಮಲಗುವುದು ಆಯಾಸದ ಪರಿಹಾರಕ್ಕಾಗಿ ಸುಖವಾಗಿ ನಿದ್ರಿಸುವುದಕ್ಕಾಗಿ. ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ. ಹಾಸಿಗೆ ಮೀರಿ ಕಾಲು ಚಾಚುವುದು ಅಪಾಯಕರ. ಕಾಲು ನೆಲಕ್ಕೆ ಹೋಗುತ್ತದೆ. ನೆಲದ ಶೀತ ಮೈಗೇರುತ್ತದೆ. ಮಂಚದ ಮೇಲಿನ ಹಾಸಿಗೆಗಿಂತ ಕಾಲನ್ನು ಆಚೆಗೆ ಚಾಚಿದರೆ ನಿದ್ರಾಭಂಗವಾಗುತ್ತದೆ. ಆರೋಗ್ಯ ವ್ಯತ್ಯಾಸವಾಗುತ್ತದೆ.
ನೂರು ರೂಪಾಯಿ ಇಟ್ಟುಕೊಂಡು ಸಾವಿರಾರು ರೂಪಾಯಿಗಳ ವ್ಯಾಪಾರವನ್ನು ಮಾಡಲು ಸಾಧ್ಯವೇ? ನಮ್ಮ ಇತಿ ಮಿತಿಯ ಅರಿವು ಸದಾ ನಮಗಿರಬೇಕು ಆಡ೦ಬರದ ಬಾಳಿಗೆ ಬಲಿಯಾಗಿ ಸಂಕಷ್ಟವನ್ನು ನಾವೇ ಸ್ವಾಗತಿಸ ಬಾರದು. ತೃಪ್ತಿಕರವಾದಆರೋಗ್ಯಕರವಾದ ಜೀವನವನ್ನು ನಮ್ಮದಾಗಿಸಿಕೊಳ್ಳ ಬೇಕು. ಅತಿ ಆಸೆ ಗತಿಗೆಡಿಸುತ್ತದೆ. ಆನಂದಕ್ಕೆ ಮೂಲ ಅತಿಯಾಸೆಯನ್ನು ಮಾಡದಿರುವುದು. ಇರುವುದರಲ್ಲಿ ಸಂತೃಪ್ತಿಯಿಂದಿರುವುದು. ಗೌತಮ ಬುದ್ಧ ಹೇಳಿರುವಂತೆ ಆಸೆಯೇ ದುಃಖಕ್ಕೆ ಕಾರಣ.’ಅತಿಸರ್ವತ್ರವರ್ಜಯೇತ್’ ಮಿತಿಯರಿತುನಡೆವುದೆ ಎಲ್ಲಾ ರೀತಿಯಲ್ಲೂ ಎಲ್ಲರಿಗೂ ಸುಖ. ಸಾಲಮಾಡಿ ತುಪ್ಪ ತಿನ್ನುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳ ಬಾರದು. ಯಾವುದೇ ಕೆಲಸವನ್ನು ಮಾಡುವಾಗಲೂ ನಮ್ಮ ಶಕ್ತಿ ಸಾಮರ್ಥ್ಯದ ಅರಿವು ನಮಗಿರಬೇಕು. ಕಾಲಿನ ಉದ್ದಕ್ಕೆ ತಕ್ಕಂತೆ ಹಾಸಿಗೆಯನ್ನು ಹೊಲಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಹಾಸಿಗೆ ಉದ್ದಕ್ಕೆ ಅನುಗುಣವಾಗಿ ಕಾಲನ್ನು ಮಡಿಸಿಕೊಂಡು ಮಲಗುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಹಿರಿಯರು ತಮ್ಮ ಅನುಭವದಿಂದ ತಮ್ಮ ಮುಂದಿನ ಪೀಳಿಗೆಯನ್ನು ಈ ಗಾದೆಯ ಮೂಲಕ ಎಚ್ಚರಿಸಿದ್ದಾರೆ.
*********************************

10 comments:

  1. Nice...but I need explanation by taking another gadhe as support

    ReplyDelete
  2. Nice and I need ಕೈ ಕೆಸರಾದರೆ ಬಾಯಿ ಮೊಸರು

    ReplyDelete
  3. Please
    Please
    Please
    Please
    Pear
    Please
    Please
    Please
    Please
    Please

    ReplyDelete
  4. ಹಾಸಿಗೆ ಇದ್ದಷ್ಟು ಕಾಲು ಚಾಚಿ ಅದರ ಬಗ್ಗೆ ಹೆಚ್ಚಾಗಿ ವಿಸ್ತಾರ ಕೂಡಿ

    ReplyDelete
    Replies
    1. ಹೌದು ಇನ್ನು ವಿಸ್ತರಣೆ ನನಗೆ ಬೇಕು

      Delete
  5. ಚೆಚೆನ್ನಾಗಿ

    ReplyDelete
  6. Nice a good info is displayed but it would be good if still more information is needed😊

    ReplyDelete
  7. ಈ ನಿಮ್ಮ ಗಾದೆ ವಿಸ್ತರಣೆ ನನಗೆ ತುಂಬ ಉಪಯೋಗವಾಯಿತು. ತುಂಬಾ ಸರಳವಾಗಿ,ಅಥ೯ವಾಗುವಂತೆ ವಿಸ್ತರಿಸಿದ್ದೀರಿ. ವಂದನೆಗಳು. 🙏🙏🙏🙏🙏

    ReplyDelete
  8. ನಿಮ್ಮ ಗಾದೆ ಮಾತಿನ ವಿಸ್ತರಣೆ ನನಗೆ ತುಂಬಾ ಇಷ್ಟವಾಗಿದೆ ವಂದನೆಗಳು🙏🙏🙏🙏🙏🙏🙏

    ReplyDelete