Tuesday 2 February 2016

ವಿದ್ಯಾರ್ಥಿಗಳಿಗಾಗಿ 3 ಜನಪ್ರಿಯ ಗಾದೆಗಳು

1.ಶಕ್ತಿಗಿಂತ ಯುಕ್ತಿ ಮೇಲು
ಹಿರಿಯರ ಜೀವನದ ಅನುಭವದ ನುಡಿ ಮುತ್ತುಗಳೇ ಗಾದೆಗಳು. ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಬಿಂದುವಿನಲ್ಲಿ ಸಿಂಧುವಿನಂತಿದ್ದು, ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಪ್ರಸ್ತುತ ‘ಶಕ್ತಿಗಿಂತ ಯುಕ್ತಿ ಮೇಲು’ ಎಂಬ ಗಾದೆ ಹೆಚ್ಚು ಜನಪ್ರಿಯವಾದುದು. ‘ಶಕ್ತಿ’ ದೈಹಿಕ ಸಾಮಥ್ರ್ಯವನ್ನೂ, ಯುಕ್ತಿ ಬುದ್ಧಿಚಾತುರ್ಯವನ್ನೂ ಸೂಚಿಸುತ್ತವೆ. ಶಕ್ತಿಯಿಂದ ಗೆಲ್ಲಲಾಗದ ಸಂದರ್ಭದಲ್ಲಿ ಯುಕ್ತಿಯನ್ನು ಬಳಸಿ ಗೆಲ್ಲಬಹುದು. ಮೊಲ ಮತ್ತು ಸಿಂಹದ ಕಥೆಯನ್ನು ಕೇಳದೆ ಇರುವಾವರಾರು?. ಸಿಂಹದ ಬಾಯಿಂದ ತಪ್ಪಿಸಿಕೊಂಡು ತನ್ನ ಪ್ರಾಣ ರಕ್ಷಣೆಕೊಳ್ಳಲು ಮೊಲವೊಂದು ಮಾಡಿದ ತಂತ್ರ ‘ಪಂಚತಂತ್ರ’ದಲ್ಲಿ ಜನಪ್ರಿಯವಾದ ಕಥೆಯಾಗಿದೆ. ಶಕ್ತಿಗಿಂತ ಇಲ್ಲಿ ಯುಕ್ತಿ ಮೇಲ್ಗೈ ಸಾಧಿಸುತ್ತದೆ. ಬುದ್ಧಿಚಾತುರ್ಯವನ್ನು ಮೆರೆದು ತಮ್ಮನ್ನು ತಾವು ಶತ್ರುಗಳಿಂದ ಕಾಪಾಡಿಕೊಂಡ ಅನೇಕ ಸಂದರ್ಭಗಳನ್ನು ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ‘ಶಕ್ತಿಗಿಂತ ಯುಕ್ತಿ ಮೇಲು’ ಎಂಬ ಗಾದೆಯನ್ನು ಅರ್ಥೈಸಿದಾಗ ದೈಹಿಕ ಶಕ್ತಿಗಿಂತ ಯುಕ್ತಿಯೇ ಶ್ರೇಷ್ಠ ಎಂಬುದು ಸಾಬೀತಾಗುತ್ತದೆ. 
2.ಕೈ ಕೆಸರಾದರೆ ಬಾಯಿ ಮೊಸರು
ವೇದಗಳಿಗೆ ಸಮಾನವಾದ ಹಿರಿಯರ ಅನುಭವದ ಮಾತುಗಳೇ ಗಾದೆಗಳು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ  ಗಾದೆಯ ನುಡಿಯೇ ಗಾದೆಯ ಮಹತ್ವವನ್ನು ಸಾರುತ್ತದೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಉಕ್ತಿ ಜನಪದರ ಜೀವನದ ಅನುಭವದ ನುಡಿಮುತ್ತಾಗಿದೆ. ಇವು ಚಿಕ್ಕ ವಾಕ್ಯದಂತಿದ್ದರೂ ಅರ್ಥ ವೈಶಾಲ್ಯವನ್ನು ಹೊಂದಿವೆ. ಕಷ್ಟಪಡದೇ ಸುಖ ಸಿಗುವುದಿಲ್ಲವೆಂಬ ಧ್ವನಿ ಈ ಗಾದೆಯಲ್ಲಿದೆ. ಕೈ ಕೆಸರಾಗುವುದು ದುಡಿಮೆಯ ಸಂಕೇತವಾದರೆ ಮೊಸರು ಅದರ ಪ್ರತಿಫಲವನ್ನು ಪಡೆಯುವುದನ್ನು ಸೂಚಿಸುತ್ತದೆ. ಹೊಲದಲ್ಲಿ ಕಷ್ಟಪಟ್ಟು ದುಡಿದ ರೈತನ ಬಾಳು ಹಸನಾಗುತ್ತದೆ. ಯಾವ ರೈತ ಹೊಲ ಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸಮಾಡಿ ಸಮೃದ್ಧವಾಗಿ ಬೆಳೆಬೆಳೆದು, ದನಕರುಗಳನ್ನು ಸಾಕಿಸಲಹುತ್ತಾನೋ ಅವನು ಸಂತೃಪ್ತ ಜೀವನವನ್ನು ಸಾಗಿಸುತ್ತಾನೆ. ಭಕ್ತಿ ಭಂಡಾರಿ ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ನುಡಿಯೂ ಈ ಗಾದೆಯ ಸಾರವೇ ಆಗಿದೆ. ‘ಕಷ್ಟಪಟ್ಟರೆ ಫಲವುಂಟು’ ಎಂಬ ಗಾದೆ ಮಾತು ಸಹ ಇದನ್ನೇ ಹೇಳುತ್ತದೆ. ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಅಭ್ಯಾಸ ಮಾಡಿ ಜ್ಞಾನಾರ್ಜನೆ ಮಾಡಿದರೆ ಮುಂದಿನ ಜೀವನ ಸುಖಕರವಾಗುವುದು. ಯಾವ ವಿದ್ಯಾರ್ಥಿಗಳು ಪ್ರಾರಂಭದಿಂದಲೂ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆಯೋ ಅವರಿಗೆ ಉತ್ತಮ ಫಲಿತಾಂಶ ದೊರತೇ ದೊರೆಯುತ್ತದೆ. ಅಂತಹ ವಿದ್ಯಾರ್ಥಿಗಳು ಜೀವನದಲ್ಲೂ ಮೇಲೆಬರುವುದರಲ್ಲಿ ಯಾವ ಸಂಶಯವೂ ಇಲ್ಲ. 
3.ಹೆತ್ತತಾಯಿ, ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು.
ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುವ ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳೇ ಆಗಿವೆ. ಪ್ರಸ್ತುತ ‘ಹೆತ್ತತಾಯಿ, ಹೊತ್ತ್ತನಾಡು ಸ್ವರ್ಗಕ್ಕಿಂತ ಮಿಗಿಲು’ ಎಂಬುದು ಜನಪ್ರಿಯ ಗಾದೆಯಾಗಿದೆ. ನಮಗೆ ಜನ್ಮಕೊಟ್ಟ ತಾಯಿ ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ನಮ್ಮನ್ನು ಇಟ್ಟುಕೊಂಡು ಪೋಷಿಸಿದರೆ, ಹೊತ್ತನಾಡು ಜೀವನಪೂರ್ತಿ ತನ್ನ ಮಡಿಲಲ್ಲಿ ಇಟ್ಟುಕೊಂಡು ನಮ್ಮನ್ನು ಪೋಷಿಸುತ್ತದೆ. ಹೆತ್ತತಾಯಿಯ ಮಡಿಲಿನಲ್ಲಿ ದೊರಕುವ ಸುಖಕ್ಕೆ ಸಮನಾವಾದುದು ಮತ್ತೊಂದಿಲ್ಲ. ಇದೇ ರೀತಿ ಜನ್ಮಭೂಮಿಯ ಸಂಬಂಧವು ಸಹ ಬಿಡಿಸಲಾಗುವುದಿಲ್ಲ. ನಮ್ಮ ನಾಡಿನಲ್ಲಿ ನಮಗೆ ದೊರೆಯುವ ಸಂತಸ ಮತ್ತೆಲ್ಲೂ ದೊರೆಯುವುದಿಲ್ಲ. ಮಹಾಕಾವ್ಯ ರಾಮಾಯಣದಲ್ಲಿ ಶ್ರೀರಾಮನು ಲಕ್ಷ್ಮಣನಿಗೆ ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ಎಂಬ ಇದೇ ಮಾತನ್ನು ಹೇಳುತ್ತಾನೆ. ಹೆತ್ತತಾಯಿ ಮತ್ತು ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದವು.
****************

7 comments: