Saturday 5 March 2016

ಅಪಠಿತ ಗದ್ಯಭಾಗದ ಚಟುವಟಿಕೆಗಳು 4

1.  ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
        ವಿರೋಧಪಕ್ಷದ ಸದಸ್ಯರಾಗಿದ್ದ ಕೆಂಗಲ್ ಹನುಮಂತಯ್ಯನವರು ಒಮ್ಮೆ ನ್ಯಾಯವಿಧಾಯಕ ಸಭೆಯಲ್ಲಿ ಮಂತ್ರಿಗಳು ತಮ್ಮ ಸಂಬಳ ಸವಲತ್ತುಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಮಸೂದೆಯನ್ನು ಮಂಡಿಸಿ ಸರ್ಕಾರಕ್ಕೆ ಇರುಸುಮುರುಸು ಮಾಡಿದರು. ತಮ್ಮ ವಾದಕ್ಕೆ ಪೂರಕವಾಗಿ ಕೆಂಗಲ್ಲರು ಇಂಗ್ಲೆಂಡಿನ ಸಂಸದೀಯ ಪದ್ಧತಿಯ ರೀತಿನೀತಿಗಳು, ಅಲ್ಲಿನ ಮಂತ್ರಿಗಳ ಸಂಬಳಸಾರಿಗೆ ಬಗೆಗೆ ತಿಳಿಸಿ ಸಮರ್ಥವಾಗಿ ಮಾತನಾಡಿ ಎಲ್ಲರ ಪ್ರಶಂಸೆ ಗಳಿಸಿದರು. ಆದರೆ ಮೈಸೂರಿನ ಸನ್ನಿವೇಶದಲ್ಲಿ ಇಂಥ ಕ್ರಮ ಸೂಕ್ತವಲ್ಲವೆಂದು ಸೀತಾರಾಮಶಾಸ್ತ್ರಿಗಳು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿ ಹನುಮಂತಯ್ಯನವರ ಶ್ರಮವನ್ನು ನೀರಿನಲ್ಲಿ ಕೊಚ್ಚಿಹೋಗುವಂತೆ ಮಾಡಿದರು. ಆ ಕಲಾಪ ಮುಗಿದು ಸದಸ್ಯರೆಲ್ಲಾ ಹೊರಡುವಾಗ ಕೆ. ಚಂಗಲರಾಯ ರೆಡ್ಡಿಯವರು ಎಲ್ಲರಿಗೂ ಕೇಳಿಸುವಂತೆ “ಎಲ್ಲಾ ಹಾಳುಮಾಡಿಬಿಟ್ಟೆ!" ಎಂದು ತೆಲುಗಿನಲ್ಲಿ ಗಟ್ಟಿಯಾಗಿ ಶಾಸ್ತ್ರಿಗಳನ್ನು ಬೈದು ಹೊರಗೆ ಹೋದರು.
ಕನ್ನಡ ಪ್ರಥಮ ಭಾಷೆಗಾಗಿ
2 X 2=4

1. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆಗೆ ಒಳಗಾದ ಸನ್ನಿವೇಶವನ್ನು ಕುರಿತು ಬರೆಯಿರಿ.
2. ಕೆಂಗಲ್ ಹನುಮಂತಯ್ಯನವರು ಶಾಸ್ತ್ರೀಗಳನ್ನು ಬೈಯಲು ಕಾರಣವೇನು?


                         ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                            1 X 4=4

1. ಸರ್ಕಾರಕ್ಕೆ ಇರುಸುಮುರುಸಾಗಲು ಕಾರಣವೇನು ? 
2. ಕೆಂಗಲ್ ಹನುಮಂತಯ್ಯನವರು ಎಲ್ಲರ ಪ್ರಶಂಸೆ ಗಳಿಸಿದುದು ಹೇಗೆ ? 
3. ಸರ್ಕಾರದ ಪರವಾಗಿ ವಾದ ಮಾಡಿದವರು ಯಾರು ? 
4. ಕೆ. ಚಂಗಲರಾಯ ರೆಡ್ಡಿಯವರು ಏನೆಂದು ಬೈದರು?
**************

2. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.  
   
      ಭೀಷ್ಮರ ಸೇನಾಧಿಪತ್ಯದಲ್ಲಿ ಎಂಟು ದಿನ ಭಯಂಕರ ಯುದ್ಧ ನಡೆಯಿತು. ಭೀಷ್ಮರನ್ನು ಎದುರಿಸಿ ಗೆಲ್ಲುವ ಮಾರ್ಗಕಾಣದೆ ಪಾಂಡವರು ಚಿಂತಾಕ್ರಾಂತರಾದರು. ಎಂಟು ದಿನವಾದರೂ ಭೀಷ್ಮನು ಒಬ್ಬ ಪಾಂಡವನನ್ನೂ ಬಲಿತೆಗೆದುಕೊಳ್ಳಲಿಲ್ಲವಲ್ಲ ಎಂಬ ಆತಂಕ ದುರ್ಯೋಧನನಿಗಾಯಿತು. ಕೋಪದಿಂದ ದುರ್ಯೋಧನನು ಭೀಷ್ಮರನ್ನು ನನಗಿಂತ ನಿಮಗೆ ಪಾಂಡವರೆಂದರೆ ಹೆಚ್ಚು ಪ್ರೀತಿ ಆದ್ದರಿಂದಲೇ ನೀವು ಅವರಲ್ಲಿ ಒಬ್ಬನನ್ನೂ ಕೊಲ್ಲಲಿಲ್ಲವೆಂದು ಹೀಯಾಳಿಸಿದನು. ತಕ್ಷಣವೇ ಭೀಷ್ಮನುನಾಳೆಯ ಯುದ್ಧದಲ್ಲಿ ನಾನು ಅರ್ಜುನನನ್ನು ಕೊಲ್ಲದಿದ್ದರೆ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆಂದು ಪ್ರತಿಜ್ಞೆಮಾಡಿದರು. ಇದರಿಂದ ಕೌರವರಿಗೆ ಅತೀವ ಸಂತೋಷವೂ, ಪಾಂಡವರಿಗೆ ಅತಿಯಾದ ಭಯವೂ ಆಯಿತು. ನಮ್ಮೆಲ್ಲರ ರಕ್ಷಕನಾಗಿ ಭಗವಾನ್ ಶ್ರೀ ಕೃಷ್ಣನಿರುವಾಗ ನಮಗೇಕೆ ಯೋಚನೆ ಎಂದು ಅರ್ಜುನನು ನಿಶ್ಚಿಂತೆಯಿಂದಿದ್ದನು. ಅರ್ಜುನನು ತನ್ನ ಮೇಲೆ ಇಟ್ಟಿರುವ ದೃಢವಿಶ್ವಾಸದಿಂದ ಕೃಷ್ಣನು ಸಂತುಷ್ಟನಾದನು.
ಕನ್ನಡ ಪ್ರಥಮ ಭಾಷೆಗಾಗಿ
2 X 2=4

1. ಭೀಷ್ಮರು ಪ್ರತಿಜ್ಞೆ ಮಾಡಿದ ಸನ್ನಿವೇಶವನ್ನು ಕುರಿತು ಬರೆಯಿರಿ.
2. ಕೃಷ್ಣನು ಸಂತುಷ್ಟನಾಗಲು ಕಾರಣವೇನು?

                                           ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                           1 X 4=4
1. ದುರ್ಯೋಧನನ ಆತಂಕಕ್ಕೆ ಕಾರಣವೇನು?
2. ದುರ್ಯೋಧನನು ಭೀಷ್ಮರನ್ನು ಏನೆಂದು ಹೀಯಾಳಿಸಿದನು?
3. ಕೌರವರಿಗೆ ಅತೀವ ಸಂತೋಷವಾದುದೇಕೆ?

4. ಕೃಷ್ಣನು ಸಂತುಷ್ಟನಾದುದೇಕೆ?
***************
3. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ 
ಭಾರತೀಯರ ಸ್ವಾಭಿಮಾನದ ಸಂಕೇತ ಹಾಗೂ ದೇಶ ಭಕ್ತಿಯ ದ್ಯೋತಕವೇ ಆಗಿರುವ ನಮ್ಮ ರಾಷ್ಟ್ರಧ್ವಜವು, ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿರುವ ತ್ರಿವರ್ಣಧ್ವಜ. ಧ್ವಜದ ಅಗಲ ಮತ್ತು ಉದ್ದವು 2:3 ಅನುಪಾತದಲ್ಲಿದೆ. ಮಾನ್ಯ ಪಿಂಗಾಳಿ ವೆಂಕಯ್ಯನವರು ಇದನ್ನು ವಿನ್ಯಾಸಗೊಳಿಸಿದವರು.
ತ್ರಿವರ್ಣಧ್ವಜದಲ್ಲಿರುವ ಕೇಸರಿ ಬಣ್ಣವು, ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ. ನಡುವಿನ ಬಿಳಿಯ ಬಣ್ಣವು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೆನಿಸಿದೆ. ಹಸಿರು ಬಣ್ಣವು ಭೂದೇವಿಯ ಪ್ರತೀಕವಾಗಿದ್ದು, ಸಮೃದ್ಧಿ ಮತ್ತು ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರವು ನೀಲಿ ಬಣ್ಣದಿಂದ ಕೂಡಿದ್ದು ಪ್ರಗತಿಯ ಸಂಕೇತವೇ ಆಗಿದೆ. ದೇಶದ ಬೆಳವಣಿಗೆ, ಶಿಸ್ತು, ನ್ಯಾಯ, ನಿರಂತರತೆಯನ್ನು ಇದು ಸೂಚಿಸುತ್ತದೆ.    
ಕನ್ನಡ ಪ್ರಥಮ ಭಾಷೆಗಾಗಿ
                                                                   2 X 2=4         
ಪ್ರಶ್ನೆಗಳು:
1.      ನಮ್ಮ ರಾಷ್ಟ್ರಧ್ವಜದ ವಿನ್ಯಾಸ ಮತ್ತು ಮಹತ್ವವನ್ನು ತಿಳಿಸಿರಿ.
2.     ನಮ್ಮ ರಾಷ್ಟ್ರ ಧ್ವಜದಲ್ಲಿರುವ ಬಣ್ಣಗಳು ಏನನ್ನು ಸೂಚಿಸುತ್ತವೆ?

ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                                           1 X 4=4
ಪ್ರಶ್ನೆಗಳು:
1. ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
2. ತ್ರಿವರ್ಣಧ್ವಜದ ಅಗಲ ಮತ್ತು ಉದ್ದವು ಯಾವ ಅನುಪಾತದಲ್ಲಿದೆ?
3. ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಚಕ್ರವು ಏನನ್ನು ಸೂಚಿಸುತ್ತದೆ?
4. ನಮ್ಮ ರಾಷ್ಟ್ರಧ್ವಜದಲ್ಲಿ ನಿಮಗೆ ಅತಿಹೆಚ್ಚು ಇಷ್ಟವಾದ ಬಣ್ಣಯಾವುದು ಏಕೆ?
*************

No comments:

Post a Comment